ಆ.30 'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ: ಮೈಸೂರಿನಲ್ಲಿ ಭರ್ಜರಿ ಸಿದ್ಧತೆ, 10 ಸಾವಿರ ಸ್ಥಳಗಳಲ್ಲಿ ನೇರಪ್ರಸಾರ
ಮೈಸೂರು ಆಗಸ್ಟ್ 29: ಕೆ2 ಖಜಾನೆ ಮೂಲಕ 50 ಲಕ್ಷ ರೂ ಜನರ ಖಾತೆಗೆ ಹಣ ರವಾನೆಯಾಗಲು ಈಗಾಗಲೇ ಸಿದ್ಧತೆ ನಡೆದಿದೆ. ಆಗಸ್ಟ್ 30ರೊಳಗೆ 1.10 ಕೋಟಿ ಫಲಾನುಭವಿಗಳಿಗೂ 2 ಸಾವಿರ ರೂ ಖಾತೆಗೆ ಜಮಾ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 30ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಂಗ್ರೆಸ್ನ ಗ್ಯಾರಂಟಿ ಯೋಜನೆ 'ಗೃಹಲಕ್ಷ್ಮಿ' ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಡಿ.ಕೆ.ಶಿವಕುಮಾರ್ ಸಿದ್ಧತಾ ಕಾರ್ಯವನ್ನು ಪರಿಶೀಲನೆ ನಡೆಸಿದ್ದಾರೆ.

ಆಗಸ್ಟ್ 30ರಂದು ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಫಲಾನುಭವಿಗಳ ಮೊಬೈಲ್ ನಂಬರ್ಗೆ ಬ್ಯಾಂಕಿನಿಂದ ಮಾಹಿತಿ ಬರುತ್ತದೆ. ಅಂದಿನಿಂದಲೇ ಹಣ ವರ್ಗಾವಣೆ ಆಗುತ್ತದೆ. ಸರ್ವರ್ ಸಮಸ್ಯೆ ಇದ್ದರೆ ಒಂದೆರಡು ದಿನದಲ್ಲಿ ಮನೆಯ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಜೊತೆಗೆ ನೇರಪ್ರಸಾರ ಇರಲಿದೆ. ಗ್ರಾಪಂ, ನಗರಪಾಲಿಕೆ, ನಗರಸಭೆ ಮಟ್ಟದಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರ ಆಗುವ ಕಾರಣ ಹೆಚ್ಚಿನ ಸಂಖ್ಯೆ ಮಹಿಳೆಯರು ಸೇರುವ ನಿರೀಕ್ಷೆ ಇದೆ. ಪ್ರತಿ ಜಿಲ್ಲೆಯ ಒಂದೆರಡು ಗ್ರಾಪಂಗಳಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕೂಡ ನಡೆಸಲಾಗುವುದು. ಪ್ರತಿ ಪಂಚಾಯಿತಿಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಮುಖ್ಯ ವೇದಿಕೆಗೆ 140 ಅಡಿ ಸ್ಕ್ರೀನ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇಂದು ಮತ್ತೊಮ್ಮೆ ಗೃಹಲಕ್ಷ್ಮಿ ಕಾರ್ಯಕ್ರಮ ರಿಹರ್ಸಲ್ ಮಾಡಲಾಗುವುದು. ಉದ್ಘಾಟನಾ ಸಮಾರಂಭ ದಿನ ಯಾವುದೇ ಅಡ್ಡಿ, ಆತಂಕ ಇರಬಾರದು. ತಾಂತ್ರಿಕ ಸಮಸ್ಯೆ ಕಂಡು ಬಾರದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಪಂ ಮಟ್ಟದಲ್ಲಿ ಏನೆಲ್ಲಾ ತಯಾರಿಯಾಗಿದೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಗೃಹಲಕ್ಷ್ಮಿ ಚಾಲನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಮೈಸೂರು, ತುಮಕೂರು, ಗದಗ, ರಾಯಚೂರು, ಕಲಬುರಗಿ, ವಿಜಯಪುರ, ಬೀದರ್ ಸೇರಿದಂತೆ ವಿವಿಧ ಗ್ರಾಪಂ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಡಿ.ಕೆ.ಶಿವಕುಮಾರ್ ಜೂಮ್ ಮೀಟಿಂಗ್ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು.












Click it and Unblock the Notifications