ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು
ಮೈಸೂರು, ಅಕ್ಟೋಬರ್. 15: ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನ ನಡುವೆ ಮೂಡಿ ಬಂದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತದ ಸುಧೆ ನೆರೆದಿದ್ದ ಜನರನ್ನು ಮೂಕ ವಿಸ್ಮಿತರನ್ನಾಗಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ 38 ಪೊಲೀಸ್ ವಾದ್ಯ ವೃಂದದ ಸುಮಾರು 500ಕ್ಕೂ ಹೆಚ್ಚು ಮಂದಿ ಶಿಸ್ತಿನಿಂದ ನುಡಿಸಿದ ಪೊಲೀಸ್ ಸಮೂಹ ವಾದ್ಯ ಇಳಿಹೊತ್ತಿನಲ್ಲಿ ತಂಪಾದ ಗಾಳಿಯೊಂದಿಗೆ ಅಲೆ ಅಲೆಯಾಗಿ ತೇಲಿ ಬಂದು ಶೋತೃಗಳನ್ನು ಮೋಡಿ ಮಾಡಿತು.
ಅರಮನೆ ಮುಂಭಾಗ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸಮೂಹ ವಾದ್ಯ ಮೇಳ ಪ್ರಮುಖ ಆಕರ್ಷಣೆಯಾಗಿದೆ.

ಮೈಸೂರು ದಸರಾದ ಅವಿಭಾಜ್ಯ ಅಂಗವಾಗಿರುವ ಪೊಲೀಸ್ ವಾದ್ಯಮೇಳದಲ್ಲಿ ವಾದ್ಯ ನುಡಿಸುತ್ತ ಹಾಕುವ ಹೆಜ್ಜೆಗಳು, ತ್ವರಿತ ನಡಿಗೆ ಮತ್ತು ತ್ವರಿತ ಹಾಗೂ ನಿಧಾನ ನಡಿಗೆ ಸಾರ್ವಜನಿಕರನ್ನು ರೋಮಾಂಚನ ಗೊಳಿಸಿತು.
ಎಸ್ ಪಿಬಿ ಸಂಗೀತಕ್ಕೆ ಮೈಮರೆತ ಅಭಿಮಾನಿಗಳು
ಮಳೆಯಲ್ಲಿ ನೆನೆಯುತ್ತಾ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾನಸುಧೆಯಲ್ಲಿ ಅರಮನೆ ನಗರಿಯ ಸಂಗೀತಪ್ರಿಯರು ಮಿಂದೆದ್ದರು. ಎಸ್ಪಿಬಿಯ ಕಂಠಸಿರಿಯಿಂದ ಹೊಮ್ಮಿದ ಗೀತೆಗಳು ಶ್ರೋತೃಗಳನ್ನು ಬೆಚ್ಚಗಾಗಿಸಿತು.

ಮಳೆ ಮತ್ತು ಸಂಗೀತದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಈ ಸ್ಪರ್ಧೆಯಲ್ಲಿ ಸಂಗೀತವೂ ಸೋಲಲಿಲ್ಲ, ಮಳೆಯೂ ಗೆಲ್ಲಲಿಲ್ಲ. ಗೆದ್ದವರು ಅಕ್ಷರಶಃ ಎಸ್ಪಿಬಿ ಅಭಿಮಾನಿಗಳು. 1 ಗಂಟೆ ಸತತ ಸುರಿದ ಮಳೆಯಲ್ಲಿಯೂ ಕದಲದೆ ನಿಂತು ಸಂಗೀತ ಆಲಿಸಿದರು. ಸುರಿಯುತ್ತಿದ್ದ ಮಳೆಯನ್ನು ತಾಳಿಕೊಂಡು ಸಂಗೀತ ರಸಿಕರು ಸಂಗೀತ ಲೋಕದ ಅನಭಿಶಕ್ತ ದೊರೆಯ ಇಂಪಾದ ಕಂಠಸಿರಿಗೆ ಕಿವಿಯಾದರು.











Click it and Unblock the Notifications