ಮೈಸೂರಿಗೆ ನೀರು ಪೂರೈಸುವ ಹೊಣೆ ಜಲಮಂಡಳಿಗೆ?
ಮೈಸೂರು, ಮೇ 20 : ಮೈಸೂರು ನಗರದ ನೀರು ಸರಬರಾಜು ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಿಕೊಡುವ ಬಗ್ಗೆ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಂಗಳವಾರ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮೈಸೂರು ಮಹಾನಗರ ಪಾಲಿಕೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಅವರು ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಶಕ್ತಿ, ಸಿಬ್ಬಂದಿ ಹಾಗೂ ಮೂಲ ಸೌಕರ್ಯದ ವ್ಯವಸ್ಥೆ ಪಾಲಿಕೆಗೆ ಇದೆಯೇ ಎಂದು ಪ್ರಶ್ನಿಸಿದರು.

ಜೆಸ್ಕೋ ಜೊತೆಗಿನ ಒಪ್ಪಂದದ ಅವಧಿ ಮುಗಿದಿದ್ದು, ಮೈಸೂರು ನಗರ ಪಾಲಿಕೆ ನೇರವಾಗಿ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಬೇಕಾಗಿದೆ ಅಥವ ನೀರು ಸರಬರಾಜು ಮಂಡಳಿಗೆ ಜವಾಬ್ದಾರಿ ವಹಿಸಿಕೊಡಬೇಕಾಗಿದೆ. ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯೇ ನೀರು ಸರಬರಾಜು ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು. [ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ, ಹಳ್ಳಿಗರ ಪ್ರತಿಜ್ಞೆ]
40 ಸಾವಿರ ಅನಧಿಕೃತ ಸಂಪರ್ಕ : ಮೈಸೂರು ನಗರಕ್ಕೆ ನೀರು ಪೂರೈಸುವ ಸಂಬಂಧ ಪಾಲಿಕೆಗೆ 3.88 ಕೋಟಿ ರೂ. ವೆಚ್ಚವಾಗುತ್ತಿದೆ. 3.50 ಕೋಟಿ ರೂ. ಆದಾಯ ಬರುತ್ತಿದೆ. 40 ಸಾವಿರ ಅನಧಿಕೃತ ಸಂಪರ್ಕಗಳಿವೆ ಹಲವು ಪ್ರದೇಶಗಳಲ್ಲಿ ಮೀಟರ್ ಅಳವಡಿಕೆ ಆಗಿಲ್ಲ. ಈ ಎಲ್ಲ ನ್ಯೂನತೆ ಸರಿಪಡಿಸಿ, ನೀರು ಪೂರೈಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದರು. [ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಈ ಸುದ್ದಿ ಓದಿ]
ನಗರದ ನೀರು ಸರಬರಾಜು ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಿಕೊಡುವ ಬಗ್ಗೆ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಮಹದೇವಪ್ರಸಾದ್, ಮೇಯರ್ ಲಿಂಗಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications