ಮೈಸೂರು ವಿವಿಗೆ 150 ಉಪನ್ಯಾಸಕರ ನೇಮಿಸಲು ಒಪ್ಪಿಗೆ
ಮೈಸೂರು, ಫೆ. 5: ಮೈಸೂರು ವಿಶ್ವವಿದ್ಯಾಲಯದಲ್ಲಿ ಒಟ್ಟು 211 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 150 ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮಿತಿ ಸಭೆಯಲ್ಲಿ ಪ್ರೊ. ರಂಗಪ್ಪ ಈ ವಿಷಯ ತಿಳಿಸಿದ್ದಾರೆ. ಉಳಿದ 60 ಹುದ್ದೆಗಳಿಗೂ ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದು ಪ್ರೊ. ರಂಗಪ್ಪ ಹೇಳಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವ ವಿಭಾಗಗಳನ್ನು ಮುಚ್ಚಲಾಗುವುದು. ಅಲ್ಲಿದ್ದ ಉಪನ್ಯಾಸಕರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಲು ಸಾಧ್ಯ ಎಂದು ತಿಳಿಸಿದರು. [ಮೈಸೂರು ವಿವಿಗೆ ಜೋಡಿಯಾದ ಜಪಾನ್ ವಿವಿ]
ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಿಲ್ಲ. ಅಲ್ಲದೆ, ಸಂಶೋಧನಾ ವಿದ್ಯಾರ್ಥಿಗಳು ಕೂಡ ವಿಶ್ವವಿದ್ಯಾಲಯದಲ್ಲಿ ಕಡಿಮೆಯಾಗುತ್ತಿದ್ದಾರೆ ಎಂದು ಪ್ರೊ. ರಂಗಪ್ಪ ಆತಂಕ ವ್ಯಕ್ತಪಡಿಸಿದರು.
ಯುಜಿಸಿ ನಿಯಮದ ಪ್ರಕಾರ ಓರ್ವ ಮಾರ್ಗದರ್ಶಕ ಒಂದೇ ಸಮಯದಲ್ಲಿ ಎಂಟು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾತ್ರ ಮಾರ್ಗದರ್ಶನ ನೀಡಬಹುದು. ಅವರಲ್ಲಿಯೂ ಐವರು ಸಾಮಾನ್ಯ ವರ್ಗ, ಇಬ್ಬರು ವಿದೇಶೀಯರು ಹಾಗೂ ಓರ್ವ ಮೀಸಲು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಲು ಅವಕಾಶವಿದೆ. ಆದರೆ, ಅನೇಕರು ಈ ಸಂಖ್ಯೆಯನ್ನು ಮೀರಿದ್ದಾರೆ ಎಂದು ಹೇಳಿದ್ದಾರೆ. [ವಿವಿಯಲ್ಲಿ ಧಮ್ ಹೊಡೆದ್ರೆ ಪರೀಕ್ಷೆ ಇಲ್ಲ]
ರಜಿಸ್ಟ್ರಾರ್ (ಮೌಲ್ಯಮಾಪನ) ಶ್ರೀಜಯ್ ದೇವರಾಜ್ ಅರಸ್ ಮಾತನಾಡಿ, ವಿಶ್ವವಿದ್ಯಾಲಯದ ವತಿಯಿಂದ ಸುಮಾರು 4,000 ಪಿಎಚ್.ಡಿ ವಿದ್ಯಾರ್ಥಿಗಳ ಅಂಕಿ ಅಂಶ ಸಂಗ್ರಹಿಸಿದೆ. ವಿದ್ಯಾರ್ಥಿಗಳು ಹಾಗೂ ಅವರ ಮಾರ್ಗದರ್ಶಕರ ವಿವರಗಳನ್ನು ಶೀಘ್ರ ವೆಬ್ ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಮಾರ್ಗದರ್ಶಕರು ನಿಯಮವನ್ನು ಸರಿಯಾಗಿ ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡದಲ್ಲಿ ವಿದೇಶಿ ವಿದ್ಯಾರ್ಥಿಗಳು ಡಾಕ್ಟರೇಟ್ ಮಾಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಅವರಿಗಾಗಿ ಮೀಸಲಿಟ್ಟ ಸ್ಥಾನದಳನ್ನು ಆಸಕ್ತ ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡಬೇಕು. ಇದಕ್ಕಾಗಿ ಈಗಿರುವ ನಿಯಮಗಳನ್ನು ಸಡಿಲಿಸಬೇಕು ಎಂದು ಕುವೆಂಪು ಇನ್ಸ್ಟಿಟ್ಯೂಟ್ ಆಫ್ ಕನ್ನಡ ಸ್ಟಡೀಸ್ (ಕೆಐಕೆಎಸ್) ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಗೆ ಹೆಚ್ಚು ಬೆಂಬಲ ವ್ಯಕ್ತವಾಯಿತು. ಆದರೆ, ಈ ಬೇಡಿಕೆಯು ಮುಂದಿನ ದಿನಗಳಲ್ಲಿ ಯುಜಿಸಿ ರೂಪಿಸಿರುವ ನಿಯಮಗಳನ್ನು ಮುರಿಯಲು ಕಾರಣವಾಗಬಹುದು ಎಂಬ ಆತಂಕದಿಂದ ತಿರಸ್ಕರಿಸಲಾಯಿತು. [ಉಮಾಶ್ರೀ ಪಿಎಚ್ ಡಿ ವಿವಾದ ಅಂತ್ಯ]
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 ಕ್ಕೆ ತಿದ್ದುಪಡಿ ತರಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಮಿತಿ ಶಿಫಾರಸ್ಸು ಮಾಡಿದೆ. ಇದರ ಪ್ರಕಾರ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಆಯಾ ವಿಶ್ವವಿದ್ಯಾಲಯದ ವ್ಯಾಪ್ತಿ ಪ್ರದೇಶದ ನಿವಾಸಿ ಆಗಿರಬೇಕೆಂಬ ನಿಯಮ ರೂಪಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಯಿತು.
ಪ್ರಸ್ತಾವಿತ ತಿದ್ದುಪಡಿಯು ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಯನ್ನು ಸೀಮಿತಗೊಳಿಸುತ್ತದೆ. ಆದ್ದರಿಂದ ಪ್ರಾದೇಶಿಕ ವ್ಯಾಪ್ತಿಯ ಕುರಿತು ರೂಪಿಸಿರುವ ನಿಯಮದ ವಿರುದ್ಧ ನಮ್ಮ ವಿಶ್ವವಿದ್ಯಾಲಯ ಹೋರಾಟ ನಡೆಸುತ್ತಿದೆ ಎಂದು ಪ್ರೊ. ರಂಗಪ್ಪ ತಿಳಿಸಿದರು.