ವೆಂಟಿಲೇಟರ್ ಬಿಡಿಭಾಗಕ್ಕಾಗಿ ನಂಜನಗೂಡಿನ ಈ ಕಾರ್ಖಾನೆಗೆ ಸಿಕ್ಕಿದೆ ಅನುಮತಿ
ಮೈಸೂರು,
ಏಪ್ರಿಲ್ 08: ಇಲ್ಲಿಗೆ ಸಮೀಪದ ನಂಜನಗೂಡು ತಾಲೂಕಿನಲ್ಲಿರುವ ಎಟಿ ಅಂಡ್ ಎಸ್ ಕಾರ್ಖಾನೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.Recommended Video
ಪ್ರಸ್ತುತ
ದೇಶ ಕೊರೊನಾ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜೀವ ರಕ್ಷಕ ವೆಂಟಿಲೇಟರ್ ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾತ್ರ ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದಿಸಬೇಕೆಂಬ ಷರತ್ತಿನೊಂದಿಗೆ ಕಾರ್ಖಾನೆ ಪ್ರಾರಂಭಿಸಲು ರಾಜ್ಯ ಕೈಗಾರಿಕಾ ಇಲಾಖೆ ಅನುಮತಿ ನೀಡಿದೆ. ಇಂದಿನಿಂದಲೇ ಈ ಎಟಿ ಅಂಡ್ ಎಸ್ ಕಾರ್ಖಾನೆ ತನ್ನ ಕೆಲಸ ಆರಂಭಿಸಲಿದೆ. id='are-slot-2' class='oiad oi-axt oiadv'>
ಅಗತ್ಯಕ್ಕೆ ತಕ್ಕಷ್ಟು ಇಲ್ಲ ವೆಂಟಿಲೇಟರ್
ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ದಾಖಲಿಸುತಿದ್ದು, ಇದಕ್ಕೆ ಪೂರಕವಾಗಿ ವಿವಿಧ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳು ಅಗತ್ಯಕ್ಕೆ ತಕ್ಕಷ್ಟು ಇಲ್ಲ. ಮತ್ತೊಂದೆಡೆ ಪರಿಸ್ಥಿತಿ ತುಂಬಾ ಹದಗೆಟ್ಟು ಛತ್ರಗಳು, ವಿದ್ಯಾರ್ಥಿ ನಿಲಯ, ರೈಲ್ವೆ ಬೋಗಿಗಳನ್ನು ಆಸ್ಪತ್ರೆಗಳಾಗಿ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡರೆ ಹೆಚ್ಚಿನ ಪ್ರಮಾಣದಲ್ಲಿ ವೆಂಟಿಲೇಟರ್ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವ ನಂಜನಗೂಡಿನಲ್ಲೂ ಸರ್ಕಾರ ಒಲ್ಲದ ಮನಸ್ಸಿನಿಂದಲೇ ಅನುಮತಿ ನೀಡಿದೆ.

ಪಾಸ್ ವ್ಯವಸ್ಥೆಗೆ ಕಾರ್ಖಾನೆ ಮುಖ್ಯಸ್ಥ ಮನವಿ
ಕಾರ್ಖಾನೆ ನೌಕರರು ಕೆಲಸಕ್ಕೆ ಬಂದು ಹೋಗಲು ಪಾಸ್ ವ್ಯವಸ್ಥೆ ಮಾಡಬೇಕೆಂದು ಕಾರ್ಖಾನೆಯ ಮುಖ್ಯಸ್ಥರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ನಂಜನಗೂಡು ರೆಡ್ ಅಲರ್ಟ್ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿರುವ ಕಾರ್ಖಾನೆಯ ಯಾವುದೇ ಸಿಬ್ಬಂದಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಮೈಸೂರಿನಿಂದ ಬಂದು ಹೋಗುವ ನೌಕರರನ್ನು ಮಾತ್ರ ಬಳಕೆ ಮಾಡಿಕೊಂಡು ಕಾರ್ಖಾನೆ ನಡೆಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಬಳಕೆ ಮಾಡಬಾರದೆಂದು ಜಿಲ್ಲಾಧಿಕಾರಿಗಳು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ವೆಂಟಿಲೇಟರ್ ಸರ್ಕ್ಯೂಟ್ ಬೋರ್ಡ್ ಉತ್ಪಾದಿಸುವ ಕಾರ್ಖಾನೆ
ಕೊರೊನಾ ವಿರುದ್ಧ ಹೋರಾಡಲು ನಮಗೆ ವೆಂಟಿಲೇಟರ್ ಗಳ ಅವಶ್ಯಕತೆ ಇದೆ. ಆದರೆ ವೆಂಟಿಲೇಟರ್ ನ ಸರ್ಕ್ಯೂಟ್ ಬೋರ್ಡ್ ಉತ್ಪಾದಿಸುವ ಎಟಿ ಅಂಡ್ ಎಸ್ ಕಾರ್ಖಾನೆ ಸೋಂಕು ಕಾಣಿಸಿಕೊಂಡಿರುವ ಜುಬಿಲಿಯೆಂಟ್ ಕಾರ್ಖಾನೆಯ ಬಳಿಯಲ್ಲೇ ಇರುವುದು ಆತಂಕ ಮೂಡಿಸಿದೆ. ಆದರೆ ಇದೊಂದು ಅನಿವಾರ್ಯ ಪರಿಸ್ಥಿತಿ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಕಾರ್ಖಾನೆ ಪ್ರಾರಂಭ ಸಂದರ್ಭ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ
ಈ ನಡುವೆ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರೆಡ್ ಜೋನ್ ಎಂದು ಗುರುತಿಸಿದೆ. ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಹೀಗೆ ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಹೀಗಾಗಿ ಮೈಸೂರಿನಲ್ಲೂ ಕಟ್ಟೆಚ್ಚರ ಮುಂದುವರೆದಿದೆ.












Click it and Unblock the Notifications