ಕೊಡಗಿನಲ್ಲಿ ಭರ್ಜರಿ ಮಳೆ, ಮಂಡ್ಯದ ಕೆಆರ್ ಎಸ್ ನಲ್ಲಿ ಹೆಚ್ಚಿದ ನೀರು
ಮೈಸೂರು, ಜೂನ್ 4 : ನಾಲ್ಕೈದು ವರ್ಷಗಳಿಂದ ಕೊಡಗಿನಲ್ಲಿ ವಾಡಿಕೆ ಮಳೆಯಾಗದ ಕಾರಣದಿಂದಾಗಿ ಕೆಆರ್ ಎಸ್ ಜಲಾಶಯ ಭರ್ತಿಯಾಗಿರಲಿಲ್ಲ. ಇದರಿಂದ ರೈತರು ಬೆಳೆಯಾಗದೆ ಕಂಗಾಲಾಗಿದ್ದರು. ಜತೆಗೆ ಮಂಡ್ಯದಲ್ಲಿ ರೈತರ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿ, ಆತ್ಮಹತ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು 119 ಮಿ.ಮೀ ಹೆಚ್ಚಿನ ಮಳೆಯಾಗಿದೆ. ಜನವರಿಯಿಂದ ಮಾರ್ಚ್ ತನಕ ಮಳೆ ಬೀಳದಿದ್ದರೂ ನಂತರ ಸುರಿದ ಮಳೆ ಕೊಡಗಿನ ಜನರಲ್ಲಿ ಆಶಾ ಭಾವನೆ ಹುಟ್ಟಿಸಿದೆ.
ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಬಂದಿದ್ದೇ ಆದರೆ ಈ ಬಾರಿ ಬಹು ಬೇಗ ಕೆಆರ್ ಎಸ್ ಜಲಾಶಯ ಭರ್ತಿಯಾಗುವುದಂತೂ ಖಚಿತ.

ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯ ವಿವರವನ್ನು ನೋಡಿದ್ದೇ ಆದರೆ ಈ ಬಾರಿ 433.95 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 314.54 ಮಿ.ಮೀ ಮಳೆಯಾಗಿದ್ದನ್ನು ಸ್ಮ್ನರಿಸಬಹುದಾಗಿದೆ.
ಕಳೆದ ವರ್ಷ ಮೇ- ಜೂನ್ ನಲ್ಲಿ ಮಳೆ ಬಿದ್ದಿತ್ತಾದರೂ ಆ ನಂತರ ಮಳೆ ಸುರಿದಿರಲಿಲ್ಲ. ಇದರಿಂದ ಅಂತರ್ಜಲ ಹೆಚ್ಚಳವಾಗಿರಲಿಲ್ಲ. ಆದರೆ ಹಿಂಗಾರು ಮಳೆ ಡಿಸೆಂಬರ್ ತನಕವೂ ಬಂದಿದ್ದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿರಲಿಲ್ಲ.
ಒಂದು ವೇಳೆ ಈ ಬಾರಿಯೂ ಉತ್ತಮ ಮಳೆಯಾದರೆ ಕೊಡಗಿನ ಜನ ಮಾತ್ರವಲ್ಲದೆ ಕಾವೇರಿ ಜಲಾನಯನ ಪ್ರದೇಶದ ಎಲ್ಲ ರೈತರಿಗೂ ಅನುಕೂಲವಾಗಲಿದೆ. ಈಗಾಗಲೇ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾದಂತೆ ಕಂಡು ಬಂದಿದೆ. ಇಲ್ಲಿನ ಇತರೆ ತೊರೆ, ನದಿಗಳಲ್ಲೂ ನೀರು ಕಾಣಿಸುತ್ತಿದೆ.
ಇತ್ತ ಕೆಆರ್ ಎಸ್ ಜಲಾಶಯದಲ್ಲಿಯೂ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಡೆಡ್ ಸ್ಟೋರೇಜ್ ದಾಟಿದ್ದ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
124.80 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಮೇ 20ರ ವೇಳೆಗೆ 69.14 ಅಡಿಗೆ ಕುಸಿದಿತ್ತು. ಆದರೆ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿದಿದ್ದರಿಂದಾಗಿ ಸದ್ಯ 74 ಅಡಿಯಷ್ಟು ತಲುಪಿದೆ. ಸುಮಾರು ಐದು ಅಡಿಯಷ್ಟು ಏರಿಕೆ ಕಂಡಿರುವುದು ಎಲ್ಲರಿಗೂ ಸಂತಸ ತಂದಿದೆ.
ಮೇ ತಿಂಗಳಲ್ಲಿ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ. ಒಂದಷ್ಟು ಮಳೆಯಿಂದ ಅನಾಹುತವಾದರೂ ನದಿಗೆ ನೀರು ಮಾತ್ರ ಹೆಚ್ಚಿನ ಪ್ರಮಾಣದಲ್ಲಿಯೇ ಹರಿದು ಬಂದಿದೆ. ಮಳೆ ಇದೇ ರೀತಿಯಲ್ಲಿ ಸುರಿದು, ಕೊಡಗಿನಲ್ಲಿ ವಾಡಿಕೆಯ ಮಳೆಯಾಗಿ ಕೆಆರ್ಎಸ್ ಜಲಾಶಯ ಭರ್ತಿಯಾದರೆ ಎಲ್ಲರೂ ನೆಮ್ಮದಿಯುಸಿರು ಬಿಡಬಹುದಾಗಿದೆ.












Click it and Unblock the Notifications