ಆನೆ ಕಂದಕಕ್ಕೆ ಕಾಲು ಜಾರಿ ಬಿದ್ದು ಬಾಲಕಿ ಸಾವು
ಪಿರಿಯಾಪಟ್ಟಣ, ಅಕ್ಟೋಬರ್ 3: ಅರಣ್ಯ ಇಲಾಖೆ ನಿರ್ಮಿಸಿದ್ದ ಕಂದಕದಲ್ಲಿ ಸಂಗ್ರಹವಾಗಿದ್ದ ನೀರಿಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಆಲದಕಟ್ಟೆ ಗಿರಿಜನ ಹಾಡಿಯಲ್ಲಿ ನಡೆದಿದೆ.
ಹಾಡಿಯ ನಿವಾಸಿ ಚಂದ್ರು ಎಂಬುವರ ಪುತ್ರಿ ಸಿಂಚನ (7) ಮೃತಪಟ್ಟ ಬಾಲಕಿ. ಅರಣ್ಯ ಇಲಾಖೆಯು ಹಾಡಿಯ ಬಳಿಯಲ್ಲಿಯೇ ಆನೆ ಕಂದಕವನ್ನು ತೋಡಿದ್ದು, ಮಳೆ ಸುರಿದ ಪರಿಣಾಮ ಅದರಲ್ಲಿ ನೀರು ಸಂಗ್ರಹವಾಗಿತ್ತು. ಬುಧವಾರ ಬೆಳಿಗ್ಗೆ ಎಂಟು ಗಂಟೆಯ ವೇಳೆಯಲ್ಲಿ ಬಾಲಕಿ ಸಿಂಚನ ಇತರೆ ಮಕ್ಕಳೊಂದಿಗೆ ಕಂದಕದ ಬಳಿಯಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಕಂದಕಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದಾಳೆ. ವಿಷಯ ತಿಳಿದು ಸ್ಥಳೀಯರು ಬಾಲಕಿಯನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿದ್ದನ್ನು ದೃಢಪಡಿಸಿದ್ದಾರೆ.
ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿದ ಅಂಗವಿಕಲರು
ಗಿರಿಜನ ಸಮುದಾಯದ ಮಗುವು ಆಕಸ್ಮಿಕವಾಗಿ ಮೃತಪಟ್ಟಿರುವ ವಿಷಯ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ನೀಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖಂಡರ ಆಕ್ರೋಶ: ಆಲದ ಕಟ್ಟೆಯ ಗಿರಿಜನ ಹಾಡಿಯಲ್ಲಿ ಸುಮಾರು 110ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಡಿ ಜನರ ಮನೆಗಳ ಪಕ್ಕದಲ್ಲೇ ಕನಿಷ್ಠ 12 ಅಡಿಗಳ ಆಳವುಳ್ಳ ಕಂದಕವನ್ನು ತೋಡಿದೆ. ಮಳೆಗಾಲದಲ್ಲಿ ಮಳೆ ನೀರು ಹರಿಯುವ ಸಂದರ್ಭ ಮಣ್ಣು ಕುಸಿದರೆ ಮನೆಗಳೇ ನಾಶವಾಗುವ ಸ್ಥಿತಿಯಲ್ಲಿವೆ. ಈ ರೀತಿ ಮಾಡಿರುವುದು ಖಂಡನೀಯ ಎಂದು ಗಿರಿಜನ ಮುಖಂಡರಾದ ಜಯಪ್ಪ, ಶಾಂತರಾಜು, ಎಂ.ಜಿ. ಮೋಹನ್, ಸಿದ್ದು ಸೇರಿದಂತೆ ಮತ್ತಿತರರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.