ಸಿಹಿ ತಿಂಡಿ ಮೇಲೆ ನಡೆದು ಕೇಕ್ ಕತ್ತರಿಸಿದ ಗಣಪತಿ ಸಚ್ಚಿದಾನಂದ
ಮೈಸೂರು, ಮೇ 25 : ತಿನ್ನುವ ಸಿಹಿ ಪದಾರ್ಥಗಳ ಮೇಲೆ ನಡೆದುಕೊಂಡು ಬಂದು ವಿಶಿಷ್ಟ ರೀತಿಯಲ್ಲಿ ತಮ್ಮ 75ನೇ ಹುಟ್ಟುಹಬ್ಬವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಆಚರಿಸಿಕೊಂಡರು.
ಇಲ್ಲಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಸ್ಯಾಹಾರಿ ಕೇಕ್ ತಯಾರಿಸಿದ್ದು ಕೇಕ್ ನ್ನು ಸಚ್ಚಿದಾನಂದ ಗಣಪತಿ ಸ್ವಾಮೀಜಿ ಕತ್ತರಿಸುವ ಮೂಲಕ 75ನೇ ಜನ್ಮದಿನವನ್ನಾಚರಿಸಿಕೊಂಡರು.

ಸ್ವಾಮೀಜಿ ಆಶ್ರಮದ ತಮ್ಮ ಕೊಠಡಿಯಿಂದ ನಾದ ಮಂಟಪದವರೆಗೆ ನಡೆದುಕೊಂಡು ಬರುವ ದಾರಿಯನ್ನು ವಿಶೇಷ ಹೂಗಳಿಂದ ಹಾಗೂ ತಿನ್ನುವ ಸಿಹಿ ತಿಂಡಿಗಳಾದ ಸರ್ಜಾಪ ಹಾಗೂ ಹೋಳಿಗೆಗಳಿಂದ ಡೈಮಂಡ್ ಆಕಾರದಲ್ಲಿ ಶೃಂಗಾರಗೊಳಿಸಲಾಗಿತ್ತು. ಶ್ರೀಗಳು ಸಿಹಿ ತಿಂಡಿಗಳ ಮೇಲೆ ನಡೆದುಕೊಂಡು ಬಂದ ದಾರಿಯಲ್ಲಿದ್ದ ಸಿಹಿ ತಿಂಡಿಗಳನ್ನು ಭಕ್ತರು ನಮಸ್ಕರಿಸಿ ಪ್ರಸಾದ ರೀತಿಯಲ್ಲಿ ಸ್ವೀಕರಿಸುತ್ತಿರುವುದು ಕಂಡು ಬಂತು.
1500 ಕೆ.ಜಿ ತೂಕದ ಬೃಹತ್ ಕೇಕ್ : ಆಂಧ್ರ ಪ್ರದೇಶದ ಭಕ್ತರೊಬ್ಬರು 1500 ಕೆ.ಜಿ ತೂಕದ 120 ಅಡಿ ಉದ್ದ ಹಾಗೂ 3 ಅಡಿ ಅಗಲದ ವಿಶೇಷವಾದ ಕೇಕ್ ಶ್ರೀಗಳ ಹುಟ್ಟು ಹಬ್ಬ ಹಿನ್ನೆಲೆ ತಯಾರಿಸಿದ್ದಾರೆ. ಈ ಕೇಕ್ ಮೇಲೆ ಸ್ವಾಮೀಜಿಯವರ 75 ಪಾದ ರಕ್ಷೆಗಳ ಮಾದರಿಯನ್ನು ಮಾಡಿ, ಶ್ರೀಗಳು ನಡೆದುಕೊಂಡ ದಾರಿಯನ್ನು ತೋರಿಸುವಂತೆ ಈ ಕೇಕ್ನ್ನ ತಯಾರಿಸಲಾಗಿದೆ. ಗಣಪತಿ ಸ್ವಾಮೀಜಿ ಭಕ್ತರ ಸಮ್ಮುಖದಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಮಂದಿ ಭಕ್ತರು ಶ್ರೀಗಳಿಗೆ ಶುಭ ಹಾರೈಸಿದರು. ಇದೇ ಮೊದಲ ಬಾರಿಗೆ ಶ್ರೀಗಳೊಬ್ಬರ ಹುಟ್ಟುಹಬ್ಬಕ್ಕೆ ದಾಖಲೆ ಮಟ್ಟದ 1500 ಕೆಜಿ ತೂಕದ ಕೇಕ್ ತಯಾರಿಸಲಾಗಿದೆ. ಆಂಧ್ರಪ್ರದೇಶ ತೆನಾಲಿಯ ಶಶಿ ಕೇಕ್ ಮೇಕರ್ಸ್ ವತಿಯಿಂದ 50ಕ್ಕೂ ಹೆಚ್ಚು ಬಾಣಸಿಗರು ಕಳೆದ ಒಂದು ವಾರದಿಂದ ಶ್ರಮಪಟ್ಟು ಈ ಗಾತ್ರದ ಕೇಕ್ ಅನ್ನು ತಯಾರಿಸಿದ್ದಾರೆ. ಇದು ಸಂಪೂರ್ಣ ಸಸ್ಯಾಹಾರಿ ಕೇಕ್ ಆಗಿದೆ. ಇನ್ನು ಕೇಕ್ ನ ಅಂಚಿನಲ್ಲಿ 108ದೀಪಗಳನ್ನು ಮತ್ತು ಮಧ್ಯಭಾಗದಲ್ಲಿ 108 ಪಾದಗಳೊಂದಿಗೆ ಅಲಂಕರಿಸಲಾಗಿತ್ತು. ಒಟ್ಟು ಕೇಕ್ ಕತ್ತರಿಸುವ ವೇಳೆ ಸಾವಿರಾರು ಭಕ್ತರು, ನೂರಾರು ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದ 18ನೇ ಬ್ರಹ್ಮೋತ್ಸವ, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 75ನೇ ಜನ್ಮದಿನೋತ್ಸವ ನಾದಮಂಟಪದ 19ನೇ ವಾರ್ಷಿಕೋತ್ಸವ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ವೇದ ನಿಧಿ ಚೆನ್ನೈ ನ ಸೆಂಗಲಿಪುರಂ ಸುಂದರರಾಮ ದೀಕ್ಷಿತರ್(ಯಜುರ್ವೇದ ಶ್ರೌತ), ಪ್ರವಚನ ನಿಧಿ ಬೆಂಗಳೂರು ಅರಳುಮಲ್ಲಿಗೆ ಪಾರ್ಥಸಾರಥಿ, ಕಳಾನಿಧಿ ಹೈದ್ರಾಬಾದ್ ಕೆ.ವಿಶ್ವನಾಥ್(ಸಿನಿಮಾ), ಆಸ್ಥಾನ್ ವಿದ್ವಾನ್ ಬೆಂಗಳೂರು ಅನಂತಕೃಷ್ಣ ಅಮೈ (ಯಜುರ್ವೇದ), ಶ್ರೀಕಾಂತ್ ದೀಕ್ಷಿತ್ ಕೊಳ್ಳೇಗಾಲ(ಶೈವ ಆಗಮ) ಚಾರುಮತಿ ರಾಮಚಂದ್ರನ್ ಚೆನ್ನೈ (ಕರ್ನಾಟಕ ಸಂಗೀತ), ಅನೂರ್ ಅನಂತಕೃಷ್ಣ ಶರ್ಮಾ,ಬೆಂಗಳೂರು(ಮೃದಂಗ), ಸಂಜೀವ್ ಅಭಯಂಕರ್,ಪುಣೆ(ಹಿಂದೂಸ್ತಾನಿ ಸಂಗೀತ), ಆಸ್ಥಾನ ಚಿತ್ರಕಾರ ಕೆ.ಸೋಮಶೇಖರ್,ಬೆಂಗಳೂರು(ವರ್ಣಚಿತ್ರಕಾರ) ದತ್ತಪೀಠ ಬಂಧು ಕೆ.ಬಿ.ಗಣಪತಿ(ಪತ್ರಿಕೋದ್ಯಮ) ಇವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.












Click it and Unblock the Notifications