ನಾಗಾಪುರ ಗಿರಿಜನ ಆಶ್ರಮ ಶಾಲೆಯಿಂದ ಹೊರಟಿತು ಗಜ ಪಯಣ
ಮೈಸೂರು, ಆಗಸ್ಟ್ 12: ಕರ್ನಾಟಕದ ಗತವೈಭವವನ್ನು ಸಾರಿದ ವಿಜಯನಗರ ಸಾಮ್ರಾಜ್ಯದ ಬಳುವಳಿಯಾದ ದಸರಾ ಪರಂಪರೆಯನ್ನು ಮೈಸೂರು ದಸರಾ ಮುಂದುವರಿಸಿಕೊಂಡು ಬಂದಿದೆ ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ. ಮಹದೇವಪ್ಪ ಹೇಳಿದರು.
ಹುಣಸೂರಿನ ಗುರುಪುರ ಗ್ರಾಮ ಪಂಚಾಯಿತಿಯ ನಾಗಾಪುರ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಗಜ ಪಯಣಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯವನ್ನು ಸಂರಕ್ಷಿಸಬೇಕು. ಮರಗಳ ಕೊರತೆಯಿಂದಾಗಿ ಮಳೆಯ ಅಭಾವ ಉಂಟಾಗಿದೆ.

ಸಿಲ್ವರ್ ಓಕ್ ಮರಗಳು ಕೊಡಗು ಭಾಗದಲ್ಲಿ ಮೋಡಗಳನ್ನು ತಡೆದು ಮಳೆ ಬೀಳುವಂತೆ ಮಾಡುತ್ತಿತ್ತು. ಇಂದು ಸಿಲ್ವರ್ ಓಕ್ ಮರಗಳು ಕಡಿಮೆಯಾಗಿರುವುದರಿಂದ ಮಳೆ ಕಡಿಮೆಯಾಗಿದೆ ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮರಗಿಡಗಳನ್ನು ಹೆಚ್ಚಾಗಿ ಬೆಳೆಸಿ ಎಂದರು.
ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿದೆ. ದುರ್ಬಲ ಜನರ ಹಕ್ಕುಗಳನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳುತ್ತದೆ. ಸಂವಿಧಾನದ ರಕ್ಷಣೆಯ ಮೂಲಕ ಪ್ರಜಾಪ್ರಭುತ್ವವವನ್ನು ಕಾಪಾಡಿಕೊಳ್ಳಬೇಕು. ಈ ಬಾರಿಯ ದಸರಾವನ್ನು ಸಂವಿಧಾನ, ಪ್ರಜಾಸತ್ತತೆ ಮತ್ತು ಸಮಾನತೆಯನ್ನು ಮೂಲವಾಗಿ ಇಟ್ಟುಕೊಂಡು ಆಚರಿಸೋಣ ಎಂದರು.

ಮಳೆಯ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ ಗಳಲ್ಲಿ ರೈತರು ಪಡೆದ ಕೃಷಿಸಾಲದಲ್ಲಿ 50,000 ಮನ್ನಾ ಮಾಡಿದೆ. ಇದರಿಂದ 22 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ ಎಂದರು.
ಹುಣಸೂರಿನಿಂದ ನಾಗರಹೊಳೆಯ 5.5 ಮೀಟರ್ ರಸ್ತೆ ವಿಸ್ತರಣೆಗಾಗಿ 5 ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ. ಇನ್ನು 6 ರಿಂದ 7 ತಿಂಗಳೊಳಗಾಗಿ ಹೊಸ ರಸ್ತೆ ನಿರ್ಮಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದರು. ಆನೆಗಳ ಬಗ್ಗೆ ನಿರ್ಮಿಸಿರುವ ಕಿರುಚಿತ್ರ 'ಗಜ' ಬಿಡುಗಡೆ ಮಾಡಿದರು. ಮಾವುತರು ಹಾಗೂ ಕಾವಾಡಿಗರಿಗೆ ತಾಂಬೂಲ ನೀಡಿ ಗೌರವಿಸಿದರು.
ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಎಂ.ಜೆ.ರವಿಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಧ್ರುವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಇನ್ನಿತರರು ಭಾಗವಹಿಸಿದ್ದರು.












Click it and Unblock the Notifications