ದಸರೆಯ ಗಜಪಯಣಕ್ಕೆ ನಾಗಾಪುರದಲ್ಲಿ ವಿಧ್ಯುಕ್ತ ಚಾಲನೆ
ಮೈಸೂರು, ಆಗಸ್ಟ್ 12 : ನಾಡಹಬ್ಬ ದಸರಾ ಮಹೋತ್ಸವ-2017ಕ್ಕೆ ಮುನ್ನುಡಿಯಾಗಿ ಪ್ರಥಮ ಕಾರ್ಯಕ್ರಮ ಗಜ ಪಯಣಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ವಿಧ್ಯುಕ್ತ ಚಾಲನೆ ನೀಡಿದರು.
ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಮಹದೇವಪ್ಪನವರು ಚಾಲನೆ ನೀಡಿದರು. ಮಾವುತರು ಹಾಗೂ ಕಾವಾಡಿಗಳಿಗೆ ಗಣ್ಯರು ತಾಂಬೂಲ ನೀಡಲಾಯಿತು. ಮಹಿಳೆಯರು 108 ಕಳಶ ಹೊತ್ತು ಗಜ ಪಯಣಕ್ಕೆ ಕಳೆ ತಂದರು.

ಮೊದಲನೇ ತಂಡದಲ್ಲಿ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ವಿಜಯಲಕ್ಷ್ಮಿ, ಕಾವೇರಿ, ಭೀಮ ಆನೆಗಳು ಆಗಮಿಸಲಿವೆ. ನಗರದ ಅರಣ್ಯ ಭವನದಲ್ಲಿ ಮೊದಲ ತಂಡದ ಈ ಆನೆಗಳು ವಾಸ್ತವ್ಯ ಹೂಡಲಿವೆ.
ಆಗಸ್ಟ್ 17ರಂದು ಅರಮನೆಗೆ ಜಿಲ್ಲಾಡಳಿತದ ವತಿಯಿಂದ ಆನೆಗಳನ್ನು ಬರಮಾಡಿಕೊಳ್ಳಲಾಗುವುದು. ಆ.20ರ ನಂತರ ಎರಡನೇ ತಂಡದ 7 ಆನೆಗಳು ಗಜಪಡೆ ತಂಡಕ್ಕೆ ಸೇರ್ಪಡೆಗೊಳ್ಳಲಿವೆ. ಈ ಬಾರಿ ದಸರಾ ಮಹೋತ್ಸವಕ್ಕೆ 15 ಆನೆಗಳು ಆಗಮಿಸುತ್ತಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ.

ನವರಾತ್ರಿ ಸೆಪ್ಟೆಂಬರ್ 21ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 30ರಂದು ವಿಜಯದಶಮಿಯಂದು ಮೈಸೂರಿನಲ್ಲಿ ಐತಿಹಾಸಿಕ, ವಿಶ್ವವಿಖ್ಯಾತ ಆನೆ ಅಂಬಾರಿ ಮೆರವಣಿಗೆ ನಡೆಯಲಿದೆ. ಈಬಾರಿ ಅರ್ಜುನ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.
ಶೂ ಧರಿಸಿ ಪೂಜೆ : ಗಜಪಯಣದ ವೇಳೆ ಗೌರವಯುತವಾಗಿ ಪೂಜೆ ಸಲ್ಲಿಸುವ ಬದಲಿಗೆ ಸಚಿವ ಮಹದೇವಪ್ಪ ಅವರು ಪಾದರಕ್ಷೆ ಧರಿಸಿ ಪೂಜೆ ಸಲ್ಲಿಸಿದ್ದು ಎಲ್ಲರಿಗೂ ಮುಜುಗರ ತರಿಸಿದೆ.












Click it and Unblock the Notifications