ಮೈಸೂರು; ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ
ಮೈಸೂರು, ಅಕ್ಟೋಬರ್ 7: ಯುವತಿಯರು, ಬಾಲಕಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ವಂಚನೆ ಎಸಗಿದ ವ್ಯಕ್ತಿಯ ವಿರುದ್ಧ ಇಂದು ಮೈಸೂರಿನಲ್ಲಿ ಯುವತಿಯರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.
ಚಾಮರಾಜ ಅಂಡರ್ ಫೀಟ್ ರಸ್ತೆಯ ಕಿಲ್ಲೆ ಮೊಹಲ್ಲಾ ನಿವಾಸಿ ಗಿರೀಶ್ ಎಂಬಾತ ಯುವತಿಯರು ಮತ್ತು ಕೆಲವು ಬಾಲಕಿಯರಿಗೆ ಧಾರಾವಾಹಿ ಮತ್ತು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 50 ಸಾವಿರದಿಂದ ಲಕ್ಷದವರೆಗೂ ಹಣ ಪೀಕಿದ್ದ. ಧಾರಾವಾಹಿಗೆ ನಟಿಯರು ಬೇಕಾಗಿದ್ದಾರೆ. ಬಾಲನಟಿಯರು ಬೇಕಾಗಿದ್ದಾರೆಂದು ಈತ ಮೈಸೂರಿನ ಸ್ಥಳಿಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ.

ಜಾಹೀರಾತು ನೋಡಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಬಯಕೆ ಇರುವ ಕೆಲವು ಯುವತಿಯರು ಈತನಿಗೆ ಸಾಕಷ್ಟು ಹಣ ನೀಡಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಅಷ್ಟೇ ಅಲ್ಲದೇ ಕೆಲವು ಯುವತಿಯರೊಂದಿಗೆ ಈತ ಅಸಭ್ಯವಾಗಿ ನಡೆದುಕೊಂಡಿದ್ದ. ಇದೀಗ ಗಿರೀಶ್ ರಾತ್ರೋ ರಾತ್ರಿ ತನ್ನ ಕಚೇರಿ ಬಂದ್ ಮಾಡಿ ಪರಾರಿಯಾಗಿದ್ದಾನೆ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇಂದು ಆತನಿಂದ ಮೋಸ ಹೋದವರು ಕಚೇರಿ ಎದುರು ಸೇರಿ ಪ್ರತಿಭಟನೆ ನಡೆಸಿದರಲ್ಲದೇ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ವಂಚಕನಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications