ಮೈಸೂರಿನಲ್ಲಿ ಆಗಸ್ಟ್ 4 , 5ರಂದು ಅನಿವಾಸಿ ಕನ್ನಡಿಗರ 4ನೇ ನಾವಿಕೋತ್ಸವ
ಮೈಸೂರು, ಆಗಸ್ಟ್ 3: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆ.4 ಮತ್ತು 5ರಂದು ಅನಿವಾಸಿ ಕನ್ನಡಿಗರ 4ನೇ ನಾವಿಕೋತ್ಸವ ನಡೆಯಲಿದೆ. ಮಾತೃ ಭಾಷೆಯ ಮೇಲಿನ ಪ್ರೀತಿ ಹಾಗೂ ಗೌರವವನ್ನು ತೋರುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾವಿಕೋತ್ಸವದ ಅಧ್ಯಕ್ಷ ಸುರೇಶ್ ರಾಮಚಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.4ರಂದು ಸಂಜೆ 4.30ಕ್ಕೆ ಕಲಾಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಆಗಮಿಸಿ ತಮ್ಮ ಕಲೆಯನ್ನು ಪ್ರದರ್ಶಿಸುವರು.
ನಂತರ ಪ್ರೊ. ಎಂ. ಕೃಷ್ಣೇಗೌಡರಿಂದ ಹಾಸ್ಯ ಸಂಜೆ, ನಟನ ರಂಗತಂಡದಿಂದ ಕೆಂಪು ಕಣಗಿಲೆ ನಾಟಕ ಹಾಗೂ ಬೆಂಗಳೂರಿನ ಎಂ.ಎಸ್.ಸತ್ಯು ನಿರ್ದೇಶನದ ಗುಲೇಬಕಾವಲಿ ನಾಟಕ ಪದರ್ಶನ ನಡೆಯಲಿವೆ ಎಂದು ಹೇಳಿದರು.

ಕವಿ ಡಾ.ನಿಸಾರ್ ಅಹಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್, ಮುಖ್ಯಮಂತ್ರಿ ಚಂದ್ರು ಮುಂತಾದವರು ಭಾಗವಹಿಸಲಿದ್ದಾರೆ. ಆ.5 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸ್ಮೃತಿ ಮನೋಜ್ ಮಾತನಾಡಿ, ರಾಜ್ಯ ಅನಿವಾಸಿಗಳ ವೇದಿಕೆ ವತಿಯಿಂದ ಆ.4ರಂದು ಬೆಳಗ್ಗೆ 10 ರಿಂದ ಹೋಟೆಲ್ ಸದರನ್ ಸ್ಟಾರ್ ನಲ್ಲಿ ಬ್ಯುಸಿನೆಸ್ ಫೋರಂ ಸಹ ಆಯೋಜಿಸಲಾಗಿದೆ ಎಂದರು.
ನಟ ಮಂಡ್ಯ ರಮೇಶ್, ಮಧುಸೂದನ್ ಶಾಸ್ತ್ರಿ, ಬಸವರಾಜ್ ಬೆಂಕಿ, ಪದ್ಮರಾವ್, ಪ್ರಕಾಶ್ ಬಾಣಾವರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.












Click it and Unblock the Notifications