ಡ್ರಾಪ್ ನೆಪದಲ್ಲಿ ಟೂರಿಸ್ಟ್ ಗೈಡ್ ದೋಚಿದ ದುಷ್ಕರ್ಮಿಗಳು
ಮೈಸೂರು, ಅಕ್ಟೋಬರ್ 24: ಡ್ರಾಪ್ ನೀಡುವ ನೆಪದಲ್ಲಿ ಟೂರಿಸ್ಟ್ ಗೈಡ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ಚಾಕು, ರಾಡ್ ನಿಂದ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಮೊಬೈಲ್, ಹಣವನ್ನು ಕಿತ್ತುಕೊಂಡು ಕಾರಿನಿಂದ ತಳ್ಳಿ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಮಹದೇವಪುರ ಮುಖ್ಯರಸ್ತೆಯ ಗಾಂಧಿನಗರ ನಿವಾಸಿ ಡೇವಿಡ್ ಅಲೆಗ್ಸಾಂಡರ್ ಎಂಬುವರೇ ಹಲ್ಲೆಗೊಳಗಾದ ಟೂರಿಸ್ಟ್ ಗೈಡ್ ಆಗಿದ್ದಾರೆ. ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಘಟನೆ ನಡೆದಿದ್ದು, ಲಷ್ಕರ್ ಪೊಲೀಸ್ ಠಾಣೆಗೆ ರಾತ್ರಿ ದೂರು ನೀಡಿದ್ದಾರೆ.
ಡೇವಿಡ್ ಅಲೆಗ್ಸಾಂಡರ್ ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಎಂದಿನಂತೆ ಶ್ರೀರಂಗಪಟ್ಟಣಕ್ಕೆ ಹೋಗಲು ಮಂಗಳವಾರ ಮುಂಜಾನೆ ಮೈಸೂರಿನ ಬಿ.ಎನ್.ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಕಪ್ಪು ಬಣ್ಣದ ಕಾರು ಇವರ ಬಳಿ ಬಂದು ನಿಂತಿದೆ. ಅದರಲ್ಲಿ ನಾಲ್ವರು ಪ್ರಯಾಣಿಕರಿದ್ದು, ಅವರಲ್ಲಿ ಓರ್ವ ಎಲ್ಲಿಗೆ ಹೋಗಬೇಕು ಎಂದು ಕೇಳಿ ಡ್ರಾಪ್ ನೀಡುತ್ತೇವೆ ಬನ್ನಿ ಎಂದು ಕರೆದು ಕೂರಿಸಿಕೊಂಡಿದ್ದಾರೆ.

ಟಿಪ್ಪು ಸರ್ಕಲ್ ದಾಟಿ ದಂಡಿ ಮಾರಮ್ಮ ದೇವಸ್ಥಾನದ ಸಮೀಪ ಹೋಗುತ್ತಿದ್ದಂತೆಯೇ ಕಾರು ನಿಲ್ಲಿಸಿ ಓರ್ವ ಡಿಕ್ಕಿಯಲ್ಲಿದ್ದ ಚಾಕು ಮತ್ತು ರಾಡ್ ತೆಗೆದುಕೊಂಡಿದ್ದಾನೆ. ಸ್ವಲ್ಪ ಮುಂದೆ ಕಾರು ಹೋಗುತ್ತಿದ್ದಂತೆಯೇ ಅವರನ್ನು ಹೆದರಿಸಿ ಗಲಾಟೆ ಮಾಡಿದರೆ ಮುಗಿಸುತ್ತೇವೆ ಹಣ ಕೊಡು ಎಂದು ಕೇಳಿದ್ದಾರೆ. ಭಯಭೀತನಾದ ಡೇವಿಡ್ ಪೊಲೀಸ್ ಚೆಕ್ ಪೋಸ್ಟ್ ಬಳಿ ಕಿರುಚಲು ಯತ್ನಿಸಿದಾಗ ಇರಿಯಲೆತ್ನಿಸಿದ್ದಾರೆ. ಅವರ ಬಳಿ ಇದ್ದ 6,000ರೂ. ನಗದು ಮತ್ತು ಮೊಬೈಲ್ ಕಸಿದು ರಸ್ತೆ ಬದಿ ತಳ್ಳಿ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಲಷ್ಕರ್ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications