ನಂಜನಗೂಡು: ಹುಟ್ಟುಹಬ್ಬ ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿತ, ನಾಲ್ವರ ಬಂಧನ
ಮೈಸೂರು, ಜೂನ್. 05: ನಂಜನಗೂಡಿನಲ್ಲಿ ಹುಟ್ಟುಹಬ್ಬ ಆಚರಣೆ ವೇಳೆ ಪ್ರಸಾದ್ ಎಂಬಾತನಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪಟ್ಟಣದ ನೀಲಕಂಠನಗರದಲ್ಲಿ 22 ವರ್ಷದ ಪ್ರಸಾದ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಯೆಬ್, ಸಲ್ಮಾನ್ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ 5 ಜನರ ವಿರುದ್ದ ಎಫ್ಐರ್ ದಾಖಲು ಮಾಡಲಾಗಿದೆ. ಶೋಯೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ದ ಪ್ರಕರಣ ದಾಖಲಾಗಿದೆ. ಸದ್ಯ ಪ್ರಸಾದ್ ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಬಜ್ಜಿ ತಿನ್ನಲೆಂದು ನಿಲಕಂಠ ನಗರಕ್ಕೆ ಬಂದಿದ್ದ ಪ್ರಸಾದ್ ಹುಟ್ಟುಹಬ್ಬ ಆಚರಿಸಿ, ಭಾರತ್ ಮಾತಾಕಿ ಜೈ ಎಂದು ಕೂಗಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅನ್ಯ ಕೋಮಿನ ಯುವಕರು ಇಲ್ಲಿ ಹುಟ್ಟುಹಬ್ಬ ಆಚರಿಸಬೇಡಿ. ಇನ್ನು ಮುಂದೆ ನಿಮ್ಮ ಮನೆಗಳಲ್ಲಿ ಹುಟ್ಟುಹಬ್ಬ ಆಚರಿಸಿ. ಇದು ನಮ್ಮ ಸರ್ಕಾರ, ನೀವು ಹಿಂದೂಗಳು ಏನು ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭಾರತ್ ಮಾತಾ ಕಿ ಜೈ ಎಂದಿದ್ದಕ್ಕೆ ಹಿಂದು ಯುವಕನ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿ, ಚೂರಿ ಇರಿದಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಜೊತೆಗೆ ಈ ಕುರಿತು ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಾಜ್ಯ ಬಿಜೆಪಿ ರಚನೆ ಮಾಡಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಸೂಚಿಸಿದೆ.

ಇನ್ನು, ಈ ಯುವಕರ ನಡುವೆ ಹಳೆಯ ಜಗಳ ಮತ್ತು ಗಲಾಟೆಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications