ನಂಜನಗೂಡಿನಲ್ಲಿ ರಾಜಹಂಸ ಪಲ್ಟಿ, ನಾಲ್ವರ ಕೈ ಮುರಿತ
ಮೈಸೂರು, ಫೆಬ್ರವರಿ 7 : ನಂಜನಗೂಡಿನ ಗೊಳೂರು ತಿರುವಿನಲ್ಲಿ ವೇಗವಾಗಿ ಬಂದ ರಾಜಹಂಸ ಬಸ್ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರ ಕೈ ತುಂಡರಿಸಿ ಬಿದ್ದಿದ್ದು, ಇಬ್ಬರ ಕೈ ಮೂಳೆ ಮುರಿತಕ್ಕೊಳಗಾದ ಘಟನೆ ಜರುಗಿದೆ.
ಸೋಮವಾರ ರಾತ್ರಿ ತ್ರಿಶೂರ್ ನಿಂದ ಹೊರಟ ಕೆ ಎಸ್ ಆರ್ ಟಿಸಿ ಬೆಂಗಳೂರು ಘಟಕಕ್ಕೆ ಸೇರಿದ ರಾಜಹಂಸ ಬಸ್ ಮಂಗಳವಾರ ಬೆಳಿಗ್ಗೆ 4.30ರ ಸುಮಾರಿಗೆ ನಂಜನಗೂಡಿನ ಗೊಳೂರು ತಿರುವಿನಲ್ಲಿ ಅಧಿಕ ವೇಗವಾಗಿ ಬಂದ ಪರಿಣಾಮ ಪಲ್ಟಿ ಹೊಡೆದಿದೆ.
ಬಿದ್ದ ರಭಸಕ್ಕೆ ನಾಲ್ಕು ಪ್ರಯಾಣಿಕರ ಕೈ ತುಂಡರಿಸಿ ಬಿದ್ದಿದ್ದು, ಇಬ್ಬರ ಕೈ ಮೂಳೆ ಮುರಿತಕ್ಕೊಳಗಾಗಿದೆ. ಬಸ್ ನಲ್ಲಿ ಒಟ್ಟು 48 ಜನ ಪ್ರಯಾಣಿಕರಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಕೆ. ಆರ್. ಆಸ್ಪತ್ರೆ ಮತ್ತು ಕೊಲಂಬಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್ ಸಂಚಾರ]
ಈ ಕುರಿತು ಕೈ ಮೂಳೆ ಮುರಿತಕ್ಕೊಳಗಾದ ಇದಾಯತ್ (48) ಮಾತನಾಡಿ ಬಸ್ಸು ವೇಗವಾಗಿ ಚಲಿಸುತ್ತಿತ್ತು. ಬೆಂಗಳೂರನ್ನು ಬೆಳಿಗ್ಗೆ 7 ಗಂಟೆಗೆ ತಲುಪಬೇಕಾಗಿತ್ತು. ಒಂದು ಕ್ಷಣ ಏನಾಯಿತು ಅಂತ ಗೊತ್ತಾಗಲೇ ಇಲ್ಲ. ಬಸ್ ಪಲ್ಟಿಯಾಗಿತ್ತು ಎಂದರು. ಗಾಯಾಳುಗಳ ಮನೆಯವರನ್ನು ಅವರ ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ.
ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಸಹಾಯದಿಂದ ಬಸ್ ನ್ನು ಮೇಲಕ್ಕೆತ್ತಿಸಿದರಲ್ಲದೇ, ಪ್ರಯಾಣಿಕರನ್ನು ಹೊರತೆಗೆದರು. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.