ಉರುಳು ಹಾಕಿ ಹಂದಿಗಳನ್ನು ಬೇಟೆಯಾಡುತ್ತಿದ್ದ ನಾಲ್ವರು ಬೇಟೆಗಾರರ ಬಂಧನ
ಮೈಸೂರು, ಮಾರ್ಚ್ 17: ಮೀಸಲು ಅರಣ್ಯದಲ್ಲಿ ಕಾಡು ಹಂದಿಯನ್ನು ಬೇಟೆ ಮಾಡುತ್ತಿದ್ದ ನಾಲ್ವರು ಬೇಟೆಗಾರರನ್ನು ಮಾಂಸ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಮೂಲತಃ ಕುಶಾಲನಗರ ಪಟ್ಟಣದ ಬೈಚನಹಳ್ಳಿಯ ಗುಂಡುರಾವ್ ಬಡಾವಣೆಯ ನಿವಾಸಿಗಳಾದ ದುರ್ಗಾಪ್ಪ (38), ಸುರೇಶ್ (28), ವೆಂಕಟೇಶ್ (28), ವಿಜಯ್ (20) ಬಂಧಿತ ಬೇಟೆಗಾರರಾಗಿದ್ದಾರೆ.
ಇವರು ಮೀಸಲು ಅರಣ್ಯಗಳಲ್ಲಿ ಉರುಳು ಹಾಕಿ ಹಂದಿಗಳನ್ನು ಬೇಟೆಯಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅರಣ್ಯಗಳಲ್ಲಿ ಹಂದಿಗೆ ಹಾಕುತ್ತಿದ್ದ ಉರುಳಿಗೆ ಸಿಲುಕಿ ಇತರೆ ಪ್ರಾಣಿಗಳು ಸಾವನ್ನಪ್ಪಿದ ಘಟನೆಗಳು ನಡೆದಿದ್ದು, ಇದರಲ್ಲಿ ಇವರ ಕೈವಾಡ ಇದೆಯಾ ಎಂಬುದು ಕೂಡ ವಿಚಾರಣೆಯಿಂದ ಗೊತ್ತಾಗಬೇಕಿದೆ.
ಈ ನಾಲ್ವರು ಬೇಟೆಗಾರರು ಪಿರಿಯಾಪಟ್ಟಣ ತಾಲೂಕಿನ ಕೊಪ್ಪಶಾಖೆಯ ಗುಳ್ಳೇದಹಳ್ಳ ಮೀಸಲು ಅರಣ್ಯದಲ್ಲಿ ಹಂದಿಯೊಂದನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದರು. ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಬೇಟೆಗೆ ಬಳಸಲಾಗಿದ್ದ ಉರುಳು, ಹಗ್ಗ ಮತ್ತಿತರ ಉಪಕರಣಗಳು ಸೇರಿದಂತೆ ಸುಮಾರು ೩೦ ಕೆ.ಜಿ. ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರತನ್ಕುಮಾರ್, ಉಪವಲಯ ಅಧಿಕಾರಿ ಮಲ್ಲಿಕಾರ್ಜುನ್, ಅರಣ್ಯ ರಕ್ಷಕ ಲಕ್ಷ್ಮಣ್, ಪೊನ್ನಪ್ಪ, ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.












Click it and Unblock the Notifications