ಮೈಸೂರು: ಲಕ್ಷಾಂತರ ರೂ.ಹಣ ಕದ್ದೊಯ್ದಿದ್ದ ನಾಲ್ವರು ದರೋಡೆಕೋರರ ಬಂಧನ
ಮೈಸೂರು, ಅಕ್ಟೋಬರ್.30: ಫಾರಿನ್ ಕರೆನ್ಸಿ ಎಕ್ಸ್ಚೆಂಜ್ ಮಾಲೀಕನ ಅಡ್ಡಗಟ್ಟಿ ಡ್ರಾಗರ್ ಚಾಕು ತೋರಿಸಿ ಬೆದರಿಸಿ ಕೆಳಕ್ಕೆ ಬೀಳಿಸಿ ಅವರ ಸ್ಕೂಟರ್ ಸಹಿತ ಲಕ್ಷಾಂತರ ರೂ ಹಣವನ್ನು ಕದ್ದೊಯ್ದಿದ್ದ ನಾಲ್ವರು ದರೋಡೆಕೋರರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅವರಿಂದ ನಗದು ಮೂರೂವರೆ ಲಕ್ಷ ರೂ ಹಾಗೂ ಹೊರದೇಶದ ಕರೆನ್ಸಿ ಮೂರು ಲಕ್ಷದ ಮೂವತ್ತೊಂದು ಸಾವಿರ ಮತ್ತು ತಲಾ ಒಂದು ಕಾರು, ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್. ನಗರದ ಮಿರ್ಲೆ ಗ್ರಾಮದ ಶ್ರೀಧರ (28), ಮೈಸೂರಿನ ಕೂರ್ಗಳ್ಳಿ ಗ್ರಾಮದ ನಟೇಶ (24), ಬೆಂಗಳೂರಿನ ವಿನಾಯಕ ಲೇಔಟ್ನ ನಿವಾಸಿ ಪ್ರಸಾದ್(24) ಮತ್ತು ಬೆಂಗಳೂರು ಉತ್ತರದ ಅಮೃತಹಳ್ಳಿ ನಿವಾಸಿ ಭರತ್ಕುಮಾರ್(20) ಬಂಧಿತರಾಗಿದ್ದಾರೆ.

ಮೈಸೂರಿನ ವಿಜಯನಗರ ಒಂದನೇ ಹಂತದ ನಿವಾಸಿ ದೇವರಾಜ ಮೊಹಲ್ಲಾದ ಶಿವರಾಂಪೇಟೆಯಲ್ಲಿ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ ಹೊಂದಿರುವ ಅರುಣ್ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಒಬ್ಬನಾದ ಕೆ.ಆರ್. ನಗರದ ಮಿರ್ಲೆ ಗ್ರಾಮದ ಶ್ರೀಧರ ಈ ಹಿಂದೆ ಶಿವರಾಂಪೇಟೆಯಲ್ಲಿರುವ ಅರಣ್ ಕುಮಾರ್ ಅವರ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ನಲ್ಲಿ ಕೆಲಸ ಮಾಡಿಕೊಂಡಿದ್ದನು.
ಇನ್ನೊಬ್ಬ ಆರೋಪಿ ಬೆಂಗಳೂರಿನ ವಿನಾಯಕ ಲೇಔಟ್ನ ನಿವಾಸಿ ಪ್ರಸಾದ್ ಆಗಾಗ್ಗೆ ಕರೆನ್ಸಿ ಎಕ್ಸ್ಚೇಂಜ್ಗಾಗಿ ಶಿವರಾಂಪೇಟೆಯಲ್ಲಿರುವ ಅರುಣ್ಕುಮಾರ್ ಅವರ ಕರೆನ್ಸಿ ಎಕ್ಸಚೆಂಜ್ ಆಫೀಸ್ಗೆ ಬಂದು ಹೋಗುತ್ತಿದ್ದನು. ಹೀಗಾಗಿ ಶ್ರೀಧರ ಮತ್ತು ಪ್ರಸಾದ್ ನಡುವೆ ಗೆಳೆತನವಾಗಿತ್ತು.
ಈ ನಡುವೆ ಇವರಿಬ್ಬರೂ ಸೇರಿ ಮಾತನಾಡುವಾಗ ಏನಾದರಾಗಲಿ ದರೋಡೆ ಮಾಡಿ ಶ್ರೀಮಂತರಾಗಬೇಕೆಂಬ ಫ್ಲಾನ್ ಮಾಡಿದ್ದಾರೆ. ಯಾರನ್ನು ದರೋಡೆ ಮಾಡುವುದು ಎಂದು ಯೋಚಿಸುವಾಗಲೇ ನೆನಪಿಗೆ ಬಂದಿದ್ದು ಅರುಣ್ಕುಮಾರ್. ಶ್ರೀಧರ್ಗೆ ಅರುಣ್ ಕುಮಾರ್ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಎಲ್ಲ ವಿಚಾರವೂ ತಿಳಿದಿತ್ತು.
ಹೀಗಾಗಿ ಅವರನ್ನು ಅಡ್ಡಗಟ್ಟಿ ದರೋಡೆ ಮಾಡಿದರೆ ಲಕ್ಷಾಂತರ ರೂ. ಹಣ ಸಿಗುತ್ತದೆ ಎಂಬುದು ಅವರ ಆಲೋಚನೆಯಾಗಿತ್ತು. ಅದರಂತೆ ಅವರಿಬ್ಬರು ದರೋಡೆಗೆ ದಿನಾಂಕ ನಿಗದಿಪಡಿಸಿ ಸ್ಕೆಚ್ ಹಾಕಿದ್ದರು. ಅವರು ಅಂದುಕೊಂಡಂತೆ ಅರುಣ್ಕುಮಾರ್ ಗೆ ಡ್ರ್ಯಾಗನ್ ತೋರಿಸಿ ಬೆದರಿಸಿ ಕೆಳಗೆ ಬೀಳಿಸಿ ಸ್ಕೂಟರ್ ನೊಂದಿಗೆ ಪರಾರಿಯಾಗಿದ್ದರು.
ಘಟನೆಯ ಬಳಿಕ ಅರುಣ್ಕುಮಾರ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಈ ನಡುವೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಕೂರ್ಗಳ್ಳಿ ಬಸ್ ಸ್ಟಾಫ್ ಬಳಿ ಕಾರ್ಯಾಚರಣಾ ತಂಡ ಗಸ್ತಿನಲ್ಲಿದ್ದಾಗ ಕಳುವಾಗಿದ್ದ ಜ್ಯೂಪಿಟರ್ ಸ್ಕೂಟರ್ ಸಹಿತ ಶ್ರೀಧರ ಮತ್ತು ನಟೇಶ ಇರುವುದು ಪತ್ತೆಯಾಗಿತ್ತು.
ಕೂಡಲೇ ಅವರನ್ನು ವಶಕ್ಕೆ ಪಡೆದು ತಂಡ ವಿಚಾರಣೆಗೊಳಪಡಿಸಿದಾಗ ತಾವು ಮಾಡಿದ ಖತರ್ ನಾಕ್ ಕೆಲಸವನ್ನು ಒಪ್ಪಿಕೊಂಡಿದ್ದು ಅವರು ನೀಡಿದ ಮಾಹಿತಿಯಂತೆ ಇನ್ನಿಬ್ಬರಾದ ಪ್ರಸಾದ್ ಮತ್ತು ಭರತ್ಕುಮಾರ್ನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಿರುವ ತನಿಖಾ ತಂಡದ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಮಣ್ಯೇಶ್ವರ ರಾವ್ ಶ್ಲಾಘಿಸಿದ್ದಾರೆ.












Click it and Unblock the Notifications