ಜೆಡಿಎಸ್ ತೊರೆದ ಮಾಜಿ ಸಚಿವ ಎಂ. ಶಿವಣ್ಣ
ಮೈಸೂರು, ಮೇ 7 : ಮಾಜಿ ಸಚಿವ ಎಂ.ಶಿವಣ್ಣ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಎಂ. ಶಿವಣ್ಣ (ಕೋಟೆ ಶಿವಣ್ಣ) ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಸಲ್ಲಿಸಿದ್ದು, ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಶಿವಣ್ಣ ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ. [ಕೋಟೆ ಶಿವಣ್ಣ 2 ದಿನಗಳಿಂದ ನಾಪತ್ತೆ]

ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿವಣ್ಣ ಅವರು, 'ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿದರು ಎಂದು ಆರೋಪಿಸಿದರು. ರಾಜ್ಯದ ತುಂಬಾ ಸಂಚರಿಸಿ ಪಕ್ಷ ಸಂಘಟನೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದೆ' ಎಂದರು. [ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ]
'ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರು ನನಗೆ ಅಗತ್ಯ ಸಹಕಾರ ನೀಡಲಿಲ್ಲ, ನನ್ನನ್ನು ಮೂಲೆಗುಂಪು ಮಾಡಿದರು. ಆದ್ದರಿಂದ ಪಕ್ಷ ತೊರೆಯುತ್ತಿದ್ದೇನೆ. ಮುಂದಿನ ರಾಜಕೀಯ ನಡೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ಸೋತಿದ್ದರು : 2014ರ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಟೆ ಶಿವಣ್ಣ ಅವರು 58,760 ಮತಗಳನ್ನುಗಳಿಸಿ ಸೋಲು ಅನುಭವಿಸಿದ್ದರು. 5,67,782 ಮತಗಳನ್ನು ಗಳಿಸಿ ಧ್ರುವನಾರಾಯಣ (ಕಾಂಗ್ರಸ್) ಅವರು ಗೆಲುವು ಸಾಧಿಸಿದ್ದರು. [ಮಾಹಿತಿ ಇಂಡಿಯಾ ವೋಟ್ಸ್]
ಲೋಕಸಭೆ ಚುನಾವಣೆ ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ನಿಗೂಢವಾಗಿ ಕಾಣೆಯಾಗಿ ಸುದ್ದಿ ಮಾಡಿದ್ದ ಶಿವಣ್ಣ ಅವರು, ನಂತರ ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಕಣ್ಣೀರು ಹಾಕಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿಯೂ ಶಿವಣ್ಣ ಚಾಮರಾಜನಗರದಲ್ಲಿ ಸೋಲುಂಡಿದ್ದರು.
ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಶಿವಣ್ಣ ಅವರು ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ತೋಟಗಾರಿಕೆ, ವಾರ್ತಾ ಮತ್ತು ಪ್ರಸಾರ, ಕನ್ನಡ ಮತ್ತು ಸಂಸ್ಕೃತಿ, ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.












Click it and Unblock the Notifications