ಕಾಂಗ್ರೆಸ್ ಸೇರುವುದಾಗಿ ಮಾಜಿ ಸಚಿವ ವಿಜಯಶಂಕರ್ ಹೇಳಿಕೆ
ಮೈಸೂರು, ಜನವರಿ 6 : ಸಂಕ್ರಾಂತಿ ಕಳೆದ ಬಳಿಕ ತಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದಾಗಿ ಬಿಜೆಪಿಯಿಂದ ಹೊರಬಂದಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗಾಗಲೇ ನನ್ನೊಡನೆ ಮಾತುಕತೆ ನಡೆಸಿದ್ದಾರೆ. ನಾನು ಮೂಲತಃ ಕಾಂಗ್ರೆಸ್ನವನಾಗಿದ್ದು, 1980-90ರ ಕಾಲದಲ್ಲಿ ಪಕ್ಷದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೆ. ಆದರೆ ಆ ಸಂದರ್ಭದಲ್ಲಿ ಕೆಲ ಭಿನ್ನಾಭಿಪ್ರಾಯ ಹಾಗೂ ನನ್ನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆ ಬಂದ ಕಾರಣ ಪಕ್ಷದಿಂದ ಹೊರಬಂದೆ. ಈಗ ಬಿಜೆಪಿಯನ್ನು ತೊರೆಯಲೂ ಇದೇ ಕಾರಣ ಎಂದರು.
ಕಾಂಗ್ರೆಸ್ ಸೇರಿದರೆ ಟಿಕೆಟ್ ನೀಡುವಂತೆ ಕೇಳುವುದಿಲ್ಲ. ಪಕ್ಷದಲ್ಲಿ ನನಗಿಂತ ಹಿರಿಯರಿದ್ದಾರೆ. ರಾಜಕಾರಣದಲ್ಲಿ ಮುಂದೇನು ಎಂಬುದು ಯಾರಿಗೂ ಗೊತ್ತಿಲ್ಲ. ಸಕ್ರಿಯ ರಾಜಕಾರಣದಲ್ಲಿ ಸವಾಲುಗಳನ್ನು ಸ್ವೀಕರಿಸಿ ನಡೆಯುತ್ತೇನೆ ಎಂದರು.

ಬಿಜೆಪಿಯ ಕೆಲವು ಸದಸ್ಯರು ಸಂವಿಧಾನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅಪರಾಧವಾಗಿದ್ದು, ಮುಖಂಡರು ತಮ್ಮ ಸ್ಥಾನಮಾನವನ್ನು ಅರಿತು ಮಾತನಾಡಬೇಕು ಎಂದರು.
ಹುಣಸೂರು ಸೂಕ್ಷ್ಮ ಪ್ರದೇಶ, ಬೇಸರ
ರಾಜ್ಯದಲ್ಲಿ ಇಂದು ಹುಣಸೂರನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸುವಂತಾಗಿರುವುದು ಬೇಸರದ ಸಂಗತಿ. ಆ ಭಾಗದಲ್ಲಿ ಬೆಳೆದವ ನಾನು. ಅದು ಶಾಂತಿ ಮತ್ತು ಸಾಮರಸ್ಯದ ಸ್ಥಳವಾಗಿದ್ದು, ಮಾಜಿ ಸಿಎಂ ದೇವರಾಜ ಅರಸುರಂತಹ ಪ್ರಭಾವಿ ರಾಜಕಾರಣಿಯನ್ನು ನೀಡಿದ ಪ್ರದೇಶವನ್ನು ಈ ರೀತಿಯಾಗಿ ಗುರುತಿಸುವಂತೆ ಮಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.











Click it and Unblock the Notifications