ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಸಿದ್ದರಾಮಯ್ಯ ಒಲವು!

ಮೈಸೂರು: ಇತ್ತೀಚೆಗಷ್ಟೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ ಹೇಳಿಕೆ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಅದು ತಮಾಷೆಗೆ ಹೇಳಿದ ಹೇಳಿಕೆ ಎನ್ನುವುದರ ಮೂಲಕ ತೆರೆ ಎಳೆದಿದ್ದಾರೆ.

ಹಾಗೆ ನೋಡಿದರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯವಿಲ್ಲ. ಅಷ್ಟೇ ಅಲ್ಲ, ಅಲ್ಲಿ ತಮ್ಮ ಪಕ್ಷದ ಸಂಘಟನೆಯನ್ನು ಮಾಡಿ ಅಧಿಕಾರಕ್ಕೆ ಬರಬೇಕೆಂಬ ಇರಾದೆ ಬಿಜೆಪಿ ನಾಯಕರಿಗೆ ಇದ್ದಂತೆ ಕಾಣುತ್ತಿಲ್ಲ. ಇಲ್ಲಿ ಈಗಾಗಲೇ ಪಾರಮ್ಯ ಸಾಧಿಸಿರುವ ಜೆಡಿಎಸ್‍ನ ಶಾಸಕ ಜಿ.ಟಿ.ದೇವೇಗೌಡರು ಅದನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರು ಜೆಡಿಎಸ್‍ನಲ್ಲಿದ್ದರೂ ಆಡಳಿತ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡು ಕ್ಷೇತ್ರಕ್ಕೆ ಏನು ಬೇಕೋ ಅದನ್ನು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ಅಂದು ಮುಖ್ಯಮಂತ್ರಿಯಾಗಿದ್ದ, ಅಭ್ಯರ್ಥಿ ಸಿದ್ದರಾಮಯ್ಯ ಅವರ ವಿರುದ್ಧವೇ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಪಡೆದದ್ದು ರಾಜಕೀಯ ಇತಿಹಾಸದಲ್ಲಿ ಮರೆಯಲಾರದ ಘಟನೆ. ಇಲ್ಲಿ ಅವರಿಗೆ ಪರೋಕ್ಷವಾಗಿ ಬಿಜೆಪಿಯು ಬೆಂಬಲ ನೀಡಿತ್ತು ಎಂಬುದನ್ನು ತಳ್ಳಿಹಾಕಲಾಗದು. ಆ ನಂತರದ ಮೈತ್ರಿ ಸರ್ಕಾರದಲ್ಲಿ ಜಿ.ಟಿ.ದೇವೇಗೌಡರಿಗೆ ಸಚಿವರ ಸ್ಥಾನ ನೀಡಿದ್ದರೂ, ಒಂದಷ್ಟು ಅಸಮಾಧಾನವಾಗಿದ್ದಂತು ಸತ್ಯ. ಬಳಿಕ ಅವರು ಪಕ್ಷದಿಂದ ದೂರವೇ ಉಳಿದಿದ್ದರು. ಆದರೆ ಕ್ಷೇತ್ರದ ಕೆಲಸದಲ್ಲಿ ಮಾತ್ರ ಹಿಂದೆ ಬೀಳಲೇ ಇಲ್ಲ. ಸ್ವಪಕ್ಷದ ನಾಯಕರ ವಿರೋಧದ ನಡುವೆಯೂ ಮೈಸೂರು ನಗರಕ್ಕೆ ಹೊಂದಿಕೊಂಡಿರುವ ತಮ್ಮ ಕ್ಷೇತ್ರಕ್ಕೆ ಒಳಪಡುವ ಗ್ರಾ.ಪಂ ಗಳನ್ನು ಮೇಲ್ದರ್ಜೆಗೇರಿಸಿ ಸದ್ಯ ಪುರಸಭೆ, ಪಟ್ಟಣ ಪಂಚಾಯಿತಿ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಸೋಲಿನ ಬಳಿಕ ಕ್ಷೇತ್ರದತ್ತ ಮುಖ ಮಾಡಲಿಲ್ಲ

ಸೋಲಿನ ಬಳಿಕ ಕ್ಷೇತ್ರದತ್ತ ಮುಖ ಮಾಡಲಿಲ್ಲ

ಮುಂದಿನ ವಿಧಾನ ಸಭಾ ಚುನಾವಣೆ ವೇಳೆಗೆ ಜಿ.ಟಿ.ದೇವೇಗೌಡರು ಜೆಡಿಎಸ್‍ನಲ್ಲಿ ಉಳಿಯುತ್ತಾರೋ ಅಥವಾ ಬಿಜೆಪಿಯತ್ತ ಮುಖ ಮಾಡುತ್ತಾರೋ ಗೊತ್ತಿಲ್ಲ. ಆದರೆ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರತ್ತ ಕ್ಷೇತ್ರದ ಮತದಾರರ ಒಲವಂತು ಇದ್ದೇ ಇರುತ್ತದೆ. ಅದಕ್ಕೇನು ಬೇಕೋ ಅದೆಲ್ಲವನ್ನು ಅವರು ಮಾಡಿಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸೋಲು ಕಂಡ ಬಳಿಕ ಆ ಕಡೆ ಅವರಾಗಲೇ ಕಾಂಗ್ರೆಸ್ ಮುಖಂಡರಾಗಲೀ ಮುಖ ಮಾಡಿದ್ದೇ ಕಡಿಮೆ. ಆದರೆ ಮತ್ತೆ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಾಯಕರು ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ

ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ

ಡಿಸೆಂಬರ್ 18 ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಲು ಪಕ್ಷದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿರುವ ನಾಯಕರು ಅವತ್ತಿನ ಕಾರ್ಯಕರ್ತರ ಸಮಾವೇಶದಲ್ಲಿ ಕೈಕೊಳ್ಳಬೇಕಾದ ತೀರ್ಮಾನಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಆದರೆ ಚುನಾವಣೆ ನಡೆದು ಸೋಲು ಕಂಡ ನಂತರ ಸಿದ್ದರಾಮಯ್ಯ ಅವರು ಕ್ಷೇತ್ರದತ್ತ ಹೆಚ್ಚಿನ ಒಲವು ತೋರಿಸಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕೂಡ ನಡೆಸಿರಲಿಲ್ಲ. ಇದೀಗ ಪ್ರಥಮ ಬಾರಿಗೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿಯಾ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಸ್ಥಳೀಯ ಕೈ ಮುಖಂಡರು ಹೇಳುವುದೇನು?

ಸ್ಥಳೀಯ ಕೈ ಮುಖಂಡರು ಹೇಳುವುದೇನು?

ಇದೀಗ ಮೈಸೂರಿನ ಕಾಂಗ್ರೆಸ್ ಭವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಕುರಿತಂತೆ ನಡೆದ ಸಭೆಯಲ್ಲಿ ಹಲವು ಸ್ಥಳೀಯ ನಾಯಕರು ಮಾತನಾಡಿರುವುದನ್ನು ಗಮನಿಸಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬ ಸಂಶಯವಂತು ಮೂಡುತ್ತದೆ. ಇಷ್ಟಕ್ಕೂ ನಾಯಕರು ಏನೇನು ಹೇಳಿದ್ದಾರೆ ಎಂಬುದನ್ನು ನೋಡುವುದಾದರೆ, ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕೆ.ಮರೀಗೌಡ ಅವರು ಹೇಳಿದಂತೆ, ""ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ನಂತರ ಪಕ್ಷದ ಕಾರ್ಯಕರ್ತರ ಯಾವುದೇ ಸಭೆ ನಡೆಸಿರಲಿಲ್ಲ. ಇದು ಅನೇಕ ಕಾರ್ಯಕರ್ತರಿಗೂ ಬೇಸರ ತಂದಿತ್ತು. ಇದೀಗ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರೇ ಈ ಕಾರ್ಯಕರ್ತರ ಸಮಾವೇಶ ಆಯೋಜಿಸಲು ಸೂಚನೆ ನೀಡಿದ್ದಾರೆ.''

ಸೋಲಿನ ಕಹಿ ಇನ್ನೂ ಮಾಸಿಲ್ಲ

ಸೋಲಿನ ಕಹಿ ಇನ್ನೂ ಮಾಸಿಲ್ಲ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಬಡವರ ಉದ್ಧಾರಕ್ಕಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದರು. ಆದರೂ ಅವರನ್ನು ಕ್ಷೇತ್ರದ ಜನರು ಚುನಾವಣೆಯಲ್ಲಿ ಕೈಬಿಟ್ಟರು. ಆ ಸೋಲಿನ ಕಹಿ ಕಾಂಗ್ರೆಸ್ ಮುಖಂಡರಲ್ಲಿ ಇನ್ನೂ ಮಾಸಿಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ಕಾರ್ಯಕರ್ತರ ಸಭೆ ಕರೆದಿರಲಿಲ್ಲ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆಂದು ಕಾರ್ಯಕರ್ತರು ಯಾರು ಎದೆಗುಂದ ಬೇಕಿಲ್ಲ. ಕಾಂಗ್ರೆಸ್ ಪಕ್ಷ ಗ್ರಾಮೀಣ ಭಾಗದಲ್ಲಿ ಬಲಿಷ್ಠವಾಗಿದೆ. ಸಿದ್ದರಾಮಯ್ಯನವರ ಕೈಬಲ ಪಡಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದಿದ್ದಾರೆ.

ಆಡಳಿತ ಪಕ್ಷದವರಿಗೆ ಸಿಂಹಸ್ವಪ್ನ

ಆಡಳಿತ ಪಕ್ಷದವರಿಗೆ ಸಿಂಹಸ್ವಪ್ನ

ಇನ್ನು ಮತ್ತೊಬ್ಬ ಕಾಂಗ್ರೆಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಸಿದ್ದರಾಮಯ್ಯನವರು ಈ ರಾಜ್ಯದ ಹಿರಿಯ ನಾಯಕರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ನವರ ವರ್ಚಸ್ಸು ಇದ್ದೇ ಇದೆ. ಅವರು ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಮೂಲಕ ಅವರಿಗೆ ಸಿಂಹಸ್ವಪ್ನವಾಗಿದ್ದಾರೆ. ಇಂತಹ ಉನ್ನತ ನಾಯಕನ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶಕ್ಕೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಮಾವೇಶದ ತೀರ್ಮಾನ ಕಾದುನೋಡಬೇಕು

ಸಮಾವೇಶದ ತೀರ್ಮಾನ ಕಾದುನೋಡಬೇಕು

ಕಾಂಗ್ರೆಸ್ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಸಭೆಗಳನ್ನು ಮಾಡಿ ಸುಮ್ಮನಾಗುತ್ತೀರಿ. ಕ್ಷೇತ್ರಕ್ಕೆ ಸಿದ್ದರಾಮಯ್ಯ ನವರು ಬಂದಾಗ ಎಲ್ಲರೂ ಬರುತ್ತಾರೆ. ಆ ನಂತರ ಕ್ಷೇತ್ರದಲ್ಲಿ ಪಕ್ಷದ ಮುಖಂಡರೇ ಇರುವುದಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಇದೇ ಪ್ರಮುಖ ಕಾರಣ. ನಮ್ಮಲ್ಲಿ ಹೊಂದಾಣಿಕೆಯಿಲ್ಲ. ಈ ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಹೀಗೆ ಒಂದಷ್ಟು ಕಾಂಗ್ರೆಸ್ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಿದ್ದಾರೆ.

ಆದರೆ ಡಿಸೆಂಬರ್ 18ರಂದು ನಡೆಯುವ ಕಾರ್ಯಕರ್ತರ ಸಮಾವೇಶ ಮತ್ತು ಅಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಹೇಗಿರುತ್ತವೆ. ಮತ್ತು ಅವು ಸಿದ್ದರಾಮಯ್ಯ ಅವರ ಮುಂದಿನ ನಿರ್ಧಾರಕ್ಕೆ ಪೂರಕವಾಗಿರುತ್ತವೆಯಾ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+