ಪೊದೆಗಳಲ್ಲಿ ಕುಳಿತು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಗಳು
ಮೈಸೂರು, ನವೆಂಬರ್ 28 : ಎಚ್ ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ಮತ್ತು ಮೇಟಿಕುಪ್ಪೆ ವನ್ಯಜೀವಿ ವಲಯದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಉಪಟಳದಿಂದ ರೈತರು ಮತ್ತು ಸಾರ್ವಜನಿಕರು ಭಯಭೀತರಾಗಿದ್ದಾರೆ.
ತಾಲೂಕಿನ ತಾರಕ, ಪೆಂಚಹಳ್ಳಿ, ಕೊತ್ತನಹಳ್ಳಿ, ಸತ್ತಿಗೆಹುಂಡಿ ಮತ್ತು ಅಂಕನಾಥಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳ ಜಾಡು ಹಿಡಿದು ದ್ರೋಣ ಮತ್ತು ಅಶೋಕ ಆನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು.
ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದರೂ ಅವೆಲ್ಲವೂ ಕಾಡಿನ ಕಡೆಗೆ ಇವೆ. ಇದರಿಂದಾಗಿ ಹುಲಿಗಳು ಕಾಡಿನಿಂದ ಹೊರಬಂದು ಪುನಃ ಕಾಡಿನ ಕಡೆಗೆ ಹೋಗಿವೆ. ಕೆಲವು ಹುಲಿಗಳು ಪೊದೆಗಳಲ್ಲಿ ಅಡಗಿ ಕುಳಿತು ಜಾನುವಾರುಗಳನ್ನು ಬಲಿ ಪಡೆಯುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಜಾನುವಾರುಗಳು ಹುಲಿಗಳಿಗೆ ಬಲಿಯಾಗಿದ್ದು, ಮನುಷ್ಯರ ಮೇಲೆ ದಾಳಿ ನಡೆದಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಹುಲಿ ಹಿಡಿಯುವ ಸಲುವಾಗಿ ಬೋನನ್ನು ಇರಿಸಲಾಗಿದ್ದು, ಅಲ್ಲಲ್ಲಿ ಹುಲಿಯ ಚಲನವಲನ ಪತ್ತೆಗಾಗಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.
ಹುಲಿ ಯೋಜನೆ ನಿರ್ದೇಶಕ ನಾರಾಯಣಸ್ವಾಮಿ, ಅರಣ್ಯದ ಸಮೀಪದಲ್ಲೇ ಇರುವ ಗ್ರಾಮಗಳಾಗಿರುವುದರಿಂದ ಹುಲಿ ಕಾಡಿಗೆ ಹೋಗಿ ರಾತ್ರಿ ವೇಳೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ. ಈ ಭಾಗದಲ್ಲಿ ದಟ್ಟವಾಗಿ ಬೆಳೆದಿರುವ ಹತ್ತಿ, ಕಬ್ಬು ಮತ್ತು ಬಾಳೆಯ ತೋಟಗಳು ಹೆಚ್ಚಾಗಿರುವುದರಿಂದ ಹುಲಿ ಪತ್ತೆ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎಂದರು.

ಆನೆಗಳ ಚಲನವಲನ ಕಾಡಂಚಿನಲ್ಲಿದ್ದರೆ ಹುಲಿಗಳು, ಕಾಡಿನಿಂದ ಹೊರಬರಲು ಹಿಂಜರಿಯುತ್ತವೆ. ನಂತರ ಕಾಡಿನಲ್ಲಿಯೇ ತಮ್ಮ ಆಹಾರ ಹುಡುಕಿಕೊಳ್ಳುವುದನ್ನು ರೂಢಿಮಾಡಿಕೊಳ್ಳುತ್ತವೆ. ಆಗ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಇಲಾಖೆಯ ಸಿಬ್ಬಂದಿ ತಿಳಿಸಿದರು.












Click it and Unblock the Notifications