ನಾಗರಹೊಳೆಯಲ್ಲಿ ಕಾಡು ಪ್ರಾಣಿಗಳ ದಾಹ ನೀಗಿಸಲು ಕೆರೆಗೆ ನೀರು ತುಂಬಿಸಿದ ಅರಣ್ಯ ಇಲಾಖೆ
ಮೈಸೂರು, ಮಾರ್ಚ್ 9: ಬೇಸಿಗೆಯ ಬಿಸಿಲಿನ ಬೇಗೆ ಏರುಮುಖವಾಗಿರುವಂತೆಯೇ ಕಾಡಿನಲ್ಲಿರುವ ಜಲ ಮೂಲಗಳು, ಕೆರೆ-ಕೊಳಗಳು ಬತ್ತಿ ಹೋಗಿವೆ. ಆದರೆ ಕಾಡಿನಲ್ಲೇ ಇರುವ ಪ್ರಾಣಿಗಳು ನೀರಿಗಾಗಿ ಹತ್ತಾರು ಕಿಲೋಮೀಟರ್ ದೂರ ತೆರಳುವ ಅನಿವಾರ್ಯತೆ ಇದೆ.
ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ. ಫೆಬ್ರವರಿ ಅಂತ್ಯದಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಪರಿಣಾಮ ನಾಗರಹೊಳೆ ಅಭಯಾರಣ್ಯದ ಸಾಕಷ್ಟು ಕೆರೆಕಟ್ಟೆಗಳು ನೀರಿಲ್ಲದೇ, ಒಣಗಿ ಹೋಗಿದ್ದವು.
ಹುಲಿ ಮದುವೆ ಮಾಡಿಕೊಳ್ಳುತ್ತೇವೆ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ನರಭಕ್ಷಕ ಹುಲಿ ದಾಳಿ
ಬೇಸಿಗೆ ತಾಪಮಾನದಿಂದ ಪಾರಾಗಲು ನೀರಿನ ಮೂಲ ಹುಡುಕಿ ಅಲ್ಲಿ ವಿಶ್ರಾಂತಿ ಪಡೆಯುವ ಹುಲಿ, ಆನೆಯಂತಹ ಕೆಲ ಪ್ರಾಣಿಗಳು ನೀರಿನ ಮೂಲ ಅರಸಿ ಹತ್ತಾರು ಕಿಲೋಮೀಟರ್ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರೀತಿ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಊರಿನೊಳಗೂ ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು.
ಇದೀಗ ಅರಣ್ಯ ಇಲಾಖೆ ಕಾಡಿನಲ್ಲಿ ನೀರಿಲ್ಲದೇ ಬರಡಾಗಿದ್ದ ಕೆರೆಗಳಿಗೆ ಟ್ಯಾಂಕರ್ಗಳ ಮೂಲಕ ನೀರಿನ ಪೂರೈಕೆ ಮಾಡಿ ಕೆರೆಗಳನ್ನು ತುಂಬಿಸಿದೆ. ಕಾಡಿನ ಕೆಲ ಕೆರೆಗಳ ಸಮೀಪ ಈಗಾಗಲೇ ಕೊಳವೆ ಬಾವಿಗಳನ್ನು ಸಹ ತೆಗೆಯಲಾಗಿದ್ದು, ಅದರ ಮೂಲಕವೂ ಸಹ ಕೆರೆಗಳಿಗೆ ಪೈಪ್ ಮೂಲಕ ನೀರಿನ ಪೂರೈಕೆ ಮಾಡಿ ಪ್ರಾಣಿಗಳ ಬಾಯಾರಿಕೆಯನ್ನು ತಣಿಸುವ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ.
ಇಲಾಖೆಯು ಇಂತಹ ನೀರುಣಿಸುವ ಕೆಲಸಕ್ಕೆ ಕೈಹಾಕಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವಾರು ವರ್ಷಗಳಿಂದಲೂ ಇದೇ ಮಾದರಿಯಲ್ಲಿ ಕೆರೆಗಳನ್ನು ತುಂಬಿಸುತ್ತಿದೆ.
ಬೇಸಿಗೆ ಆರಂಭ; ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು
ನಾಗರಹೊಳೆಯ ತಪ್ಪಲಿನಲ್ಲಿ ಕಬಿನಿ ನದಿ ಹರಿಯುವುದು ಕಾಡಿನ ಅಪಾರ ಜೀವ ಸಂತತಿಗೆ ನೀರಿನ ಮೂಲವಾಗಿದೆ. ಜಲಾಶಯ ಇರುವ ಕಾರಣ ಈ ನದಿಯಲ್ಲಿ ವರ್ಷಪೂರ್ತಿ ನೀರಿರುವ ಕಾರಣ ಕಾಡಿನ ಬಹುಪಾಲು ಆನೆಗಳು ಬೇಸಿಗೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಬೀಡು ಬಿಟ್ಟಿರುತ್ತವೆ.
ಅಲ್ಲದೇ ಕಾಡಿನ ಜೀವ ಸಂಕುಲ ಈ ನೀರನ್ನು ಆಶ್ರಯಿಸಿ ಜೀವಿಸುತ್ತವೆ. ಉಳಿದಂತೆ ಕಾಡಂಚಿಗೆ ಹೊಂದಿಕೊಂಡಂತಿರುವ ಸಾಕಷ್ಟು ಕೆರೆಗಳಿಗೆ ಪೈಪ್ಲೈನ್ ಮೂಲಕ ಸಮೀಪದ ಜಮೀನಿನ ಕೊಳವೆ ಬಾವಿಗಳ ಸಹಾಯದ ಮೂಲಕ ನೀರಿನ ಪೂರೈಕೆ ಮಾಡಿಕೊಳ್ಳಲಾಗುತ್ತಿದ್ದು, ಸದ್ಯ ನಾಗರಹೊಳೆಯ ಕಾಡಿನ ಕೆರೆಕಟ್ಟೆಗಳಲ್ಲಿ ನೀರು ಬತ್ತಿಹೋಗಿದಂತೆ ನೋಡಿಕೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ಪ್ರಾಣಿಗಳಿಗೆ ಸಂವೃದ್ಧವಾಗಿ ನೀರನ್ನು ಒದಗಿಸುವಲ್ಲಿ ಅರಣ್ಯ ಇಲಾಖೆ ಶ್ರಮಿಸಿದೆ.
ಈ ಕುರಿತು ಮಾತನಾಡಿದ ಅಂತರ ಸಂತೆಯ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಅವರು, ""ಬೇಸಿಗೆಯಲ್ಲಿ ಸಹಜವಾಗಿ ಕಾಡಿನ ಹಳ್ಳಗಳು, ಕೆರೆಗಳು ನೀರಿಲ್ಲದೇ ಬತ್ತಿಹೋಗುತ್ತವೆ. ಆಗ ಪ್ರಾಣಿಗಳಿಗೆ ನೀರಿಗಾಗಿ ಹಪಹಪಿಸುತ್ತವೆ. ಅನೇಕ ವರ್ಷಗಳಿಂದಲೂ ಇದೇ ಉದ್ದೇಶಕ್ಕೆ ಕಾಡಿನೊಳಗೆ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಇಲಾಖೆಯ ಟ್ಯಾಂಕರ್ಗಳ ಮೂಲಕ ನೀರನ್ನು ಕೆರೆ, ಒಡ್ಡುಗಳಿಗೆ ತುಂಬಿಸಲಾಗುತ್ತಿದೆ'' ಎಂದರು.