ದಸರಾದಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿ ಬಿಡುಗಡೆ, 3 ಹೊಸ ಆನೆಗಳು ಭಾಗಿ
ಮೈಸೂರು, ಆಗಸ್ಟ್ 5: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಶುಕ್ರವಾರ ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.
ಅಂಬಾರಿ ಹೊರುವ ಅಭಿಮನ್ಯು (57), ಭೀಮ (22), ಮಹೇಂದ್ರ (39), ಗೋಪಾಲಸ್ವಾಮಿ (39), ಅರ್ಜುನ (63), ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ಶ್ರೀರಾಮ (41), ವಿಜಯ (63), ಚೈತ್ರ (49), ಲಕ್ಷ್ಮಿ (21) ಹಾಗೂ ಪಾರ್ಥ ಸಾರಥಿ (18) ಈ ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಆನೆಗಳು. ಈ ಎಲ್ಲಾ ಆನೆಗಳು ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಮಡಿಕೇರಿಯ ದುಬಾರೆ, ಬಂಡೀಪುರದ ರಾಮಪುರ ಶಿಬಿರದಿಂದ ಅರಮನೆಗೆ ಬರುತ್ತಿವೆ. ಇದರಲ್ಲಿ ಪಾರ್ಥಸಾರಥಿ, ಶ್ರೀರಾಮ ಹಾಗೂ ಮಹೇಂದ್ರ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ.
ಗಜಪಯಣಕ್ಕೆ ಸಿದ್ಧತೆ
ಆಗಸ್ಟ್ 7ರಂದು ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಯ ವೀರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ಸಿಗಲಿದ್ದು, ಅರಣ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಅಂದು ಬೆಳಗ್ಗೆ 9 ರಿಂದ 9.35ರವರೆಗಿನ ಶುಭ ಮುಹೂರ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗಜಪೂಜೆ ನೆರವೇರಿಸಲಿದ್ದಾರೆ. ಅರಣ್ಯ ಸಚಿವ ಉಮೇಶ್ ಕತ್ತಿ, ಶಾಸಕ ಎಚ್.ಪಿ.ಮಂಜುನಾಥ್, ಮೇಯರ್ ಸುನಂದಾ ಪಾಲನೇತ್ರ, ಸಂಸದರಾದ ವಿ.ಶ್ರೀನಿವಾಸ್ಪ್ರಸಾದ್, ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಯ ಅಧ್ಯಕ್ಷರು ಉಪಸ್ಥಿತರಿಲಿದ್ದಾರೆ.

ಮೊದಲ ಬ್ಯಾಚ್ ಆನೆಗಳು ವೀರನಹೊಸಳ್ಳಿಯಿಂದ ನೇರವಾಗಿ ನಗರದ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿದ್ದು, ಅಲ್ಲಿಂದ ಆಗಸ್ಟ್ 10ರಂದು ಅರಮನೆ ಆವರಣ ಪ್ರವೇಶಿಸಲಿವೆ. ಮೊದಲ ತಂಡದಲ್ಲಿ ಅಂಬಾರಿ ಹೊರುವ ಅಭಿಮನ್ಯು, ಮಹೇಂದ್ರ, ಅರ್ಜುನ, ಭೀಮ, ಗೋಪಾಲ ಸ್ವಾಮಿ, ಧನಂಜಯ್ ಹಾಗೂ ಹೆಣ್ಣಾನೆಗಳಾದ ಕಾವೇರಿ, ಚೈತ್ರಾ, ಲಕ್ಷ್ಮೀ ಆಗಮಿಸುತ್ತಿವೆ. ಎರಡನೇ ತಂಡದಲ್ಲಿ ಹೊಸ ಆನೆಗಳಾದ ಪಾರ್ಥಸಾರಥಿ, ಶ್ರೀರಾಮ, ವಿಕ್ರಮ, ವಿಜಯ, ಗೋಪಿ ಆಗಮಿಸಲಿವೆ. ಒಟ್ಟು 14 ಆನೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ.

"ಗಜಪಯಣಕ್ಕೆ ವೀರನಹೊಸಳ್ಳಿಯಲ್ಲಿ ಸಕಲ ಸಿದ್ಧತೆ ಹಾಗೂ ತಯಾರಿ ಮಾಡಿಕೊಳ್ಳಲಾಗಿದೆ. ಮಾವುತರು ಮತ್ತು ಕಾವಾಡಿಗಳಿಗೆ ಶೆಡ್ಗಳನ್ನು ನಿರ್ಮಿಸುವ ಹಾಗೂ ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲಸೌರ್ಯ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ" ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ.












Click it and Unblock the Notifications