ಮೈಸೂರಿನ ಎಚ್.ಡಿಕೋಟೆಯಲ್ಲಿ ಬೋನಿಗೆ ಬಿದ್ದ ಚಿರತೆ
ಮೈಸೂರು, ಡಿಸೆಂಬರ್ 7: ಕಳೆದ ಕೆಲವು ದಿನಗಳಿಂದ ಮೈಸೂರಿನ ಎಚ್.ಡಿ.ಕೋಟೆಯ ರಾಮೇನಹಳ್ಳಿ ಗ್ರಾಮದಲ್ಲಿ ಅಡ್ಡಾಡುತ್ತಾ ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದ್ದ ಚಿರತೆಯನ್ನು ಬೋನಿಟ್ಟು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ರಾಮೇನಹಳ್ಳಿಯಲ್ಲಿ 20ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿತ್ತು. ಇದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದರು. ಸಂಜೆಯಾಗುತ್ತಿದ್ದಂತೆಯೇ ಮನೆಯಿಂದ ಹೊರಗೆ ಬರಲು ಮತ್ತು ಜಮೀನಿಗೆ ತೆರಳಲು ಭಯಪಡುವಂತಾಗಿತ್ತು. ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಚಿರತೆಯ ಹೆಜ್ಜೆಗುರುತು ಪರಿಶೀಲಿಸಿದರಲ್ಲದೆ, ಚಿರತೆ ಕಾಣಿಸಿಕೊಂಡಿದ್ದ ನಾಗನಾಯಕ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದರು.

ಈ ಬೋನಿನಲ್ಲಿ ನಾಯಿಯನ್ನು ಕಟ್ಟುತ್ತಾ ಚಿರತೆಯ ಸೆರೆಗಾಗಿ ತಂತ್ರ ರೂಪಿಸಲಾಗಿತ್ತು. ಪ್ರತಿದಿನವೂ ಜಮೀನಿನ ಮಾಲೀಕರಾದ ನಾಗನಾಯಕ ಅವರು ನಾಯಿಯನ್ನು ಕಟ್ಟುತ್ತಾ ಬಂದಿದ್ದರು. ಅದರಂತೆ ಮಂಗಳವಾರ ರಾತ್ರಿಯೂ ನಾಯಿಯನ್ನು ಕಟ್ಟಲಾಗಿತ್ತು. ಮಧ್ಯರಾತ್ರಿ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಬುಧವಾರ ಬೆಳಿಗ್ಗೆ ಚಿರತೆ ಸೆರೆಯಾಗಿರುವುದು ಬೆಳಕಿಗೆ ಬಂದಿದೆ.
ಬೋನಿನಲ್ಲಿ ಸೆರೆಯಾಗಿರುವ ಚಿರತೆ ಸುಮಾರು 6 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದ್ದು, ಇದನ್ನು ಅರಣ್ಯಾಧಿಕಾರಿಗಳು ನಾಗರಹೊಳೆ ಅರಣ್ಯಕ್ಕೆ ಬಿಟ್ಟಿದ್ದಾರೆ.











Click it and Unblock the Notifications