Get Updates
Get notified of breaking news, exclusive insights, and must-see stories!

ನಾಗರಹೊಳೆಯಲ್ಲಿ ಕಾಡ್ಗಿಚ್ಚು ತಡೆಗೆ ಡ್ರೋಣ್, ಸಿಸಿಟಿವಿ ಕ್ಯಾಮೆರಾ ಕಣ್ಣು

ಮೈಸೂರು, ಫೆಬ್ರವರಿ 3: ಪ್ರತಿವರ್ಷವೂ ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚಿಗೆ ನಾಶವಾಗುವ ಅರಣ್ಯ ಪ್ರದೇಶಗಳ ಸಾಲಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವೂ ಸೇರುವುದರಿಂದ ಇತ್ತೀಚೆಗೆ ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತಂತ್ರಜ್ಞಾನ ಸಹಿತ ಸದಾ ಕಾಡ್ಗಿಚ್ಚು ತಡೆಗೆ ಸಿದ್ಧವಾಗಿರುವ ತಂಡವನ್ನು ಸಜ್ಜುಗೊಳಿಸಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಬಿದ್ದ ಬೆಂಕಿಗೆ ನಾಗರಹೊಳೆ ಅಭಯಾರಣ್ಯದ ನೂರಾರು ಎಕರೆ ಪ್ರದೇಶಗಳು ನಾಶವಾಗಿದ್ದು, ಇತ್ತೀಚೆಗೆ ಬಿದಿರುಗಳು ಬೆಳೆದು ನಿಂತಿರುವುದು ಬೋಳಾದ ಅರಣ್ಯಕ್ಕೆ ಹೊಸ ಹಸಿರಿನ ಕಳೆ ಬಂದಿದೆ.

 ಕಾಡ್ಗಿಚ್ಚಿಗೆ ನಾಶವಾದ ಅರಣ್ಯ ಪ್ರದೇಶವೆಷ್ಟು?

ಕಾಡ್ಗಿಚ್ಚಿಗೆ ನಾಶವಾದ ಅರಣ್ಯ ಪ್ರದೇಶವೆಷ್ಟು?

ಬಂಡೀಪುರದಂತೆ ನಾಗರಹೊಳೆ ಅರಣ್ಯದ ನಡುವೆ ಹೆದ್ದಾರಿಗಳು ಹಾದು ಹೋಗಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಗ್ರಾಮಗಳಿವೆ. ಹೀಗಾಗಿ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆ ಅಗ್ನಿ ಅನಾಹುತಗಳು ಸಂಭವಿಸುತ್ತವೆ. ಈ ಹಿಂದೆ ಇಲ್ಲಿ ನಡೆದ ಅಗ್ನಿ ಅನಾಹುತಗಳನ್ನು ನೋಡಿದರೆ ನೈಸರ್ಗಿಕವಾಗಿ ನಡೆದುದಕ್ಕಿಂತ ಉದ್ದೇಶ ಪೂರ್ವಕವಾಗಿಯೇ ಅರಣ್ಯಕ್ಕೆ ಬೆಂಕಿ ಹಚ್ಚಿದ ಪ್ರಕರಣಗಳು ನಡೆದಿವೆ.

ಇದುವರೆಗೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕಾಡ್ಗಿಚ್ಚಿನಿಂದ ಆಗಿರುವ ಎಷ್ಟು ಅರಣ್ಯ ನಾಶದ ಬಗ್ಗೆ ನೋಡುವುದಾದರೆ 2014-15ರಲ್ಲಿ 6.08 ಹೆಕ್ಟೇರ್, 2015-16ರಲ್ಲಿ 48ಹೆಕ್ಟೇರ್, 2016-17ರಲ್ಲಿ ಅತಿಹೆಚ್ಚು ಅಂದರೆ 106 ಹೆಕ್ಟೇರ್ ಪ್ರದೇಶಗಳಲ್ಲಿ ಅರಣ್ಯ ನಾಶವಾಗಿತ್ತು.

2017-18ರಲ್ಲಿ 15ಹೆಕ್ಟೇರ್, 2018-19ರಲ್ಲಿ 16 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದ್ದರೆ, 2020ರ ನಂತರ ಕೊರೊನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಲಾಕ್‌ಡೌನ್ ಒಂದೆಡೆಯಾದರೆ ಮತ್ತೊಂದೆಡೆ ಅರಣ್ಯ ಇಲಾಖೆ ವಹಿಸಿದ್ದ ಮುಂಜಾಗ್ರತಾ ಕ್ರಮಗಳಿಂದಾಗಿ ದೊಡ್ಡಮಟ್ಟದಲ್ಲಿ ಯಾವುದೇ ರೀತಿಯ ಅಗ್ನಿ ಅನಾಹುತಗಳು ಸಂಭವಿಸದಿದ್ದರೂ ಕಳೆದ ಬಾರಿ ಅಂತರಸಂತೆ ವಲಯದಲ್ಲಿ 20 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ನೆಲಬೆಂಕಿಯಾಗಿತ್ತು.

 ಈ ಬಾರಿ ಹೆಚ್ಚಿನ ನಿಗಾವಹಿಸಿದ ಅಧಿಕಾರಿಗಳು

ಈ ಬಾರಿ ಹೆಚ್ಚಿನ ನಿಗಾವಹಿಸಿದ ಅಧಿಕಾರಿಗಳು

ಈ ಬಾರಿಯೂ ಬೇಸಿಗೆಯಲ್ಲಿ ಯಾವುದೇ ರೀತಿಯ ಅಗ್ನಿ ಅನಾಹುತ ಸಂಭವಿಸದಂತೆ ತಡೆಯುವ ಸಲುವಾಗಿ ಹೆಚ್ಚಿನ ಗಮನಹರಿಸಿರುವ ಅರಣ್ಯ ಇಲಾಖೆ ಬೇಸಿಗೆ ಕಾಲದಲ್ಲಿ ಅಗ್ನಿ ಅನಾಹುತಗಳು ನಡೆಯದಂತೆ ಏನೇನು ಕ್ರಮಗಳನ್ನು ಕೈಗೊಳ್ಳಬಹುದೋ ಅದೆಲ್ಲವನ್ನು ಮಾಡುವತ್ತ ಕ್ರಮ ಕೈಗೊಂಡಿದೆ.

ಸಾಮಾನ್ಯವಾಗಿ ಅಕ್ಟೋಬರ್‌ಗೆ ಮಳೆ ಕಡಿಮೆಯಾಗುತ್ತಿತ್ತು. ಹೀಗಾಗಿ ಡಿಸೆಂಬರ್ ಕೊನೆಯ ವೇಳೆಗೆ ಕುರುಚಲು ಕಾಡುಗಳು ಒಣಗುತ್ತಿದ್ದವು. ಹೀಗಾಗಿ ಡಿಸೆಂಬರ್‌ನಲ್ಲಿಯೇ ಬೆಂಕಿ ರೇಖೆಯನ್ನು ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ಡಿಸೆಂಬರ್ ಮೊದಲ ವಾರದ ತನಕವೂ ಮಳೆ ಸುರಿದಿತ್ತು. ಹೀಗಾಗಿ ಒಣಗಬೇಕಾಗಿದ್ದ ಕಾಡುಗಳು ಮತ್ತೆ ಚಿಗುರಿದ್ದವು. ಆದ್ದರಿಂದ ಅರಣ್ಯಗಳಲ್ಲಿ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಮಾಡುವುದು ತಡವಾಗಿದೆ.

 ನಾಗರಹೊಳೆ ಅರಣ್ಯದಲ್ಲಿ 2537 ಕಿ.ಮೀ ಬೆಂಕಿರೇಖೆ

ನಾಗರಹೊಳೆ ಅರಣ್ಯದಲ್ಲಿ 2537 ಕಿ.ಮೀ ಬೆಂಕಿರೇಖೆ

ಪ್ರತಿವರ್ಷವೂ ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ. ಕುಪ್ಪೆ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು ವಲಯಗಳು ಸೇರಿದಂತೆ ಎಂಟು ವಲಯಗಳಲ್ಲಿ ಸುಮಾರು 2537 ಕಿ.ಮೀ ನಷ್ಟು ಫೈರ್‌ಲೈನ್ ನಿರ್ಮಿಸಲಾಗುತ್ತದೆ. ಈಗಾಗಲೇ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಲೈನ್ ನಿರ್ಮಾಣವಾಗಿದೆ.

ಬೆಂಕಿ ಬೀಳುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಮೊದಲಿಗೆ ಬೆಂಕಿರೇಖೆ ನಿರ್ಮಾಣ ಮಾಡಲಾಗಿದೆ. ಇನ್ನೊಂದೆಡೆ ಅರಣ್ಯ ಪ್ರದೇಶದ ಡಿ-ಲೈನ್‌ನಲ್ಲಿ ಮತ್ತು ಮುಖ್ಯ ರಸ್ತೆಗಳ ಎರಡೂ ಕಡೆಗಳಲ್ಲಿ ಪ್ರತಿನಿತ್ಯ ನೀರು ಸಿಂಪಡಣೆಗೆ ಮಾಡಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

 ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಂದ ತರಬೇತಿ

ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಂದ ತರಬೇತಿ

ಈ ಸಂಬಂಧ ಅಗ್ನಿಶಾಮಕ ಅಧಿಕಾರಿಗಳು ಅರಣ್ಯ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯ ಫೆ.3ರಿಂದ ಆರಂಭವಾಗಿದ್ದು, ಫೆ.3ರಂದು ದಮ್ಮನಕಟ್ಟೆ, ಫೆ.4ರಂದು ವೀರನಹೊಸಹಳ್ಳಿ, ಫೆ.5ರಂದು ನಾಗರಹೊಳೆಯಲ್ಲಿ 8 ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ.

ಸದ್ಯ ಪ್ರತಿ ವಲಯಕ್ಕೊಂದರಂತೆ ಜೀಪ್ ಮೌಂಟೆಡ್ ಟ್ಯಾಂಕರ್ ನೀಡಲಾಗಿದ್ದು, ಒಟ್ಟಾರೆ ಅಗ್ನಿ ಅನಾಹುತ ತಡೆಗಾಗಿ 80 ಸ್ಪ್ರೇಯರ್, 15 ಪವರ್ ಮರಕಟ್ಟಿಂಗ್ ಯಂತ್ರ, 11 ಬ್ಲೋಯರ್ಸ್‌ಗಳು ಹಾಗೂ 3 ಅಗ್ನಿಶಾಮಕ ದಳದ ವಾಹನ ಮತ್ತು ಕ್ಯೂಆರ್‌ಟಿ ವಾಹನಗಳನ್ನು ಸಿದ್ಧಗೊಳಿಸಿಡಲಾಗಿದೆ. ಜತೆಗೆ ಹುಣಸೂರು, ಡಿ.ಬಿ. ಕುಪ್ಪೆ ವಲಯಕ್ಕೆ 2, ನಾಗರಹೊಳೆ, ವೀರನಹೊಸಹಳ್ಳಿ, ಆನೆಚೌಕೂರು, ಕಲ್ಲಹಳ್ಳ, ಮೇಟಿಕುಪ್ಪೆ, ಅಂತರಸಂತೆ ವಲಯಗಳಿಗೆ ಇಲಾಖಾ ವಾಹನಗಳ ಜೊತೆಗೆ ತಲಾ ಒಂದರಂತೆ 11 ಬಾಡಿಗೆ ವಾಹನಗಳನ್ನು ನೇಮಿಸಿಕೊಳ್ಳಲಾಗಿದೆ.

 ಕಣ್ಗಾವಲಿಗೆ ವಾಚ್‌ಟವರ್, ಡ್ರೋಣ್ ಬಳಕೆ

ಕಣ್ಗಾವಲಿಗೆ ವಾಚ್‌ಟವರ್, ಡ್ರೋಣ್ ಬಳಕೆ

ಪ್ರತಿವಲಯದಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 400 ಮಂದಿ ಕಾಡಂಚಿನ ಆದಿವಾಸಿಗಳನ್ನು ಪ್ರತಿ ವಲಯಕ್ಕೆ 40 ರಿಂದ 65 ಮಂದಿಯಂತೆ ನೇಮಿಸಿಕೊಳ್ಳಲಾಗಿದ್ದು, ಇವರಿಗೆ ನಿತ್ಯ ಮಧ್ಯಾಹ್ನ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮಳೆಗಾಲದಲ್ಲಿ ಉತ್ತಮವಾಗಿ ಮಳೆ ಸುರಿದ ಕಾರಣ ಅರಣ್ಯದಲ್ಲಿರುವ ಕೆರೆ- ಕಟ್ಟೆಗಳಲ್ಲಿ ನೀರು ಸಮೃದ್ಧವಾಗಿದ್ದು, ಜತೆಗೆ ಅರಣ್ಯದ ನಡುವೆ ಹರಿಯುವ ನಾಗರಹೊಳೆ, ಸಾರಥಿ, ಲಕ್ಷಣತೀರ್ಥ ನದಿಗಳಲ್ಲಿ ನೀರಿನ ಪ್ರಮಾಣ ಜಾಸ್ತಿಯಿದೆ. ಆದ್ದರಿಂದ ಬೇಸಿಗೆಯಲ್ಲಿ ವನ್ಯ ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆವುಂಟಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್ ಟವರ್ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. ಹಗಲು- ರಾತ್ರಿ ಛಾಯಾಚಿತ್ರ ತೆಗೆಯುವ 3 ಡ್ರೋಣ್ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಇದರತ್ತ ಸಿಬ್ಬಂದಿ ದಿನವಿಡೀ ಹದ್ದಿನ ಕಣ್ಣಿಟ್ಟು ಕಾಯಲಿದ್ದಾರೆ.

 ಕಾಡ್ಗಿಚ್ಚು ತಡೆಗೆ ಕೈಗೊಂಡ ಕ್ರಮಗಳೇನು?

ಕಾಡ್ಗಿಚ್ಚು ತಡೆಗೆ ಕೈಗೊಂಡ ಕ್ರಮಗಳೇನು?

ಇನ್ನು ಕಾಡ್ಗಿಚ್ಚು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ನೀಡಿರುವ ಡಿಸಿಎಫ್ ಮಹೇಶ್‌ಕುಮಾರ್, ನಾಗರಹೊಳೆ ಉದ್ಯಾನದಲ್ಲಿ ಕಾಡ್ಗಿಚ್ಚು ತಡೆಯಲು ಅಧಿಕಾರಿ- ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಳೆಗಾಲ ಹೆಚ್ಚಿದ್ದರಿಂದ ಈ ಬಾರಿ ಫೈರ್‌ಲೈನ್ ನಿರ್ಮಾಣ ತಿಂಗಳ ಕಾಲ ತಡವಾಗಿದೆ. ಕಳೆದ ಬಾರಿಯಿಂದ ಹವಾಮಾನ ಕುರಿತ ಮಾಹಿತಿ ನೀಡುವ KARSAC (Karnataka State Remote Sensing Applications Centre ) ಮೂಲಕ ಬೆಂಕಿ ಬೀಳುವ ಪ್ರದೇಶದ ಮಾಹಿತಿಯನ್ನು, ಉಷ್ಣಾಂಶ, ಶೀತ, ಗಾಳಿಯ ವೇಗ- ಬೀಸುವ ದಿಕ್ಕನ್ನು ಅಧಿಕಾರಿಗಳಿಗೆ- ಸಿಬ್ಬಂದಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ರವಾನೆಯಾಗುವ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದರು.

ಇದರಿಂದ ಉದ್ಯಾನದ ಅಧಿಕಾರಿಗಳು- ಸಿಬ್ಬಂದಿಗಳ ಮೊಬೈಲ್‌ಗೆ ತಕ್ಷಣವೇ ಮೆಸೇಜ್ ಬರಲಿದ್ದು, ತ್ವರಿತವಾಗಿ ಸ್ಥಳಕ್ಕೆ ತೆರಳಲು ನೆರವಾಗಲಿದೆ. ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಬಳಕೆಗೂ ಕ್ರಮವಹಿಸಲಾಗಿದ್ದು, ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಅರಣ್ಯದಂಚಿನ ಗ್ರಾಮಸ್ಥರು, ಆದಿವಾಸಿಗಳು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+