ವಿಶ್ವನಾಥ್ ಸಂದರ್ಶನ : ಇರುವುದೋ ಬಿಡುವುದೋ ನೀವೇ ಹೇಳಿ!
ಮೈಸೂರು, ಜೂನ್ 5: ನೇರ-ನಿಷ್ಠುರಿ, ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ, ಮಾಜಿ ಸಂಸದ ಎಚ್ ವಿಶ್ವನಾಥ್ ಕವಲು ದಾರಿಯಲ್ಲಿ ನಿಂತಿದ್ದಾರೆ. ಅವರ ನೇರವಂತಿಕೆಯೇ ಮುಳುವಾದಂತೆ ಕಾಣುತ್ತಿದೆ. ಸ್ವಜಾತಿ ಬಾಂಧವರ ಮಧ್ಯೆ ಇರಬಹುದಾದ ಪ್ರೀತಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಅವರಿಗಿಲ್ಲ.
ವಿಶ್ವನಾಥ್ ಪಕ್ಷ ಬಿಟ್ಟರು ಬಿಟ್ಟರು ಎಂಬ ಸುದ್ದಿ ಹರಿದಾಡಿತು. ಆ ನಂತರ ಜೆಡಿಎಸ್ ಗೆ ಸೇರಿದರು, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಅವರಿಗೇ ಟಿಕೆಟ್ ಅಂತಲೂ ಸುದ್ದಿಯಿದೆ. ಕಾಂಗ್ರೆಸ್ ಗೆ ಬೈ ಹೇಳಿ, ಜೆಡಿಎಸ್ ಸೇರುವ ವದಂತಿಗೆ ಪೂರಕವಾದ ಕೆಲ ಬದಲಾವಣೆಗಳು ಆಗಿವೆ. ಹಾಗಂತ ಅವರು ಇನ್ನೂ 'ಕೈ' ಸಂಬಂಧ ಕಡಿದುಕೊಂಡಿಲ್ಲ.[ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?]
ಮೈಸೂರು ಭಾಗದ ಪ್ರಬಲ ನಾಯಕರಾದ ವಿಶ್ವನಾಥ್ ಗೆ ಕಾಂಗ್ರೆಸ್ ಪಕ್ಷದೊಳಗೆ ಮನ್ನಣೆ ಸಿಗುತ್ತಿಲ್ಲ ಎಂಬುದನ್ನು ಸ್ವತಃ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧೋರಣೆಯನ್ನು ಎಗಾದಿಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರ ಮುಂದಿನ ಹಾದಿಯೇನು? ರಾಜಕೀಯ ಭವಿಷ್ಯ ಏನು?
ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ್ದಾರೆ ವಿಶ್ವನಾಥ್. ಸಂದರ್ಶನ ಇಲ್ಲಿದೆ. ಮುಂದೆ ಓದಿ.

ಪ್ರಶ್ನೆ: ನೀವೇಕೆ ಕಾಂಗ್ರೆಸ್ ನ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ?
ವಿಶ್ವನಾಥ್: ನಾನೇಕೆ ಭಾಗವಹಿಸಿರಲಿಲ್ಲ ಎಂಬುದಕ್ಕಿಂತ ಅವರೇಕೆ ಕರೆದಿರಲಿಲ್ಲ ಎಂಬ ಪ್ರಶ್ನೆ ಇರಲಿ. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ನನ್ನನ್ನು ಆಹ್ವಾನಿಸಿಯೇ ಇರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲೂ ನನ್ನ ಹೆಸರಿರಲಿಲ್ಲ. ಅದನ್ನು ನೀವೇ ಗಮನಿಸಿ. ಬೇರೆಯವರ ಹೆಸರಿದೆ. ಅಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರೂ ಅಲ್ಲ, ಅಧಿಕಾರದ ಆಸೆಯಿಂದಾಗಿ ಬಂದವರು ಯತೀಂದ್ರ, ಸುನೀಲ್ ಬೋಸ್. ಅವರಿಬ್ಬರನ್ನು ವೇದಿಕೆ ಮೇಲೆ ಮೊದಲ ಸಾಲಿನಲ್ಲಿ ಕೂರಿಸಿದ್ದರು. ಅವರಿಗಿರುವ ಬೆಲೆ ನಮಗಿಲ್ವಾ?

ಪ್ರಶ್ನೆ: ಹಾಗಾದ್ರೆ ಬೋಸ್, ಯತೀಂದ್ರರನ್ನು ವೇದಿಕೆ ಮೇಲೆ ಕೂರಿಸಿದ್ದು ತಪ್ಪೇ?
ವಿಶ್ವನಾಥ್: ಸರಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಸುನೀಲ್ ಬೋಸ್, ಯತೀಂದ್ರ ಯಾರು? ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡುತ್ತಿದ್ದಾರೆ. ಸಿಎಂ ಹಾಗೂ ಸಚಿವರು ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ಕೂರಿಸಿ ಸಮಾವೇಶ ಮಾಡಿದ್ದಾರೆ. ಬೋಸ್ ಸಂಸ್ದನೋ ಶಾಸಕನೋ ಏನು?[ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ ಎಚ್.ವಿಶ್ವನಾಥ್]

ಪ್ರಶ್ನೆ: ಸಮಾವೇಶದಲ್ಲಿ ಮುಖ್ಯಮಂತ್ರಿ ಹೇಳಿದ್ದು ಸುಳ್ಳಾ, ನಿಜಾನಾ?
ವಿಶ್ವನಾಥ್: ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಜಾರಿಗೆ ತಂದಿದ್ದೇನೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ನೀಡಿದ್ದ 168 ಭರವಸೆಗಳಲ್ಲಿ 150 ಈಡೇರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಪ್ರಣಾಳಿಕೆ ಅಂಶಗಳು ಆಗಿರುವ ಸಾಧನೆಗಳು ಯಾವುವು? ಸರಕಾರ ಈಡೇರಿಸಿದ ಭರವಸೆಗಳು ಯಾವುವು ಎಂಬುದನ್ನು ತಿಳಿಸಿಲ್ಲ.
ಸಾಧನಾ ಸಮಾವೇಶದಲ್ಲಿ ಶೇಕಡಾ 25 ಭಾಗ ಸತ್ಯ, ಇನ್ನು 75 ಭಾಗ ಸುಳ್ಳು ಮಾಹಿತಿಯನ್ನೇ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ಹೆಸರಲ್ಲಿ ದಲಿತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ರೈತರಿಗೆ ನೀಡಿದ ಕೊಡುಗೆ ಶೂನ್ಯ

ಪ್ರಶ್ನೆ: ಮಹದೇವಪ್ಪ ಮೇಲೆ ನಿಮ್ಮ ಆರೋಪವೇಕೆ?
ವಿಶ್ವನಾಥ್: ಮೊದಲು ಸಮಾವೇಶ ಆಯೋಜಿಸಿದ್ದೇ ಮಹದೇವಪ್ಪ. ಅವರು ನನ್ನ ಪರವಾಗಿ ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಸರಕಾರ ಸಾಧನಾ ಸಮಾವೇಶದಲ್ಲಿ ಯುಪಿಎಸ್ ಸಿ ಸಾಧಕರನ್ನು ಸನ್ಮಾನಿಸಿಲ್ಲ. ಸನ್ಮಾನಿಸಿದ್ದರೆ ಸಮಾವೇಶಕ್ಕೆ ಅರ್ಥ ಬರುತ್ತಿತ್ತು. ನಮ್ಮದೇ ಕ್ಷೇತ್ರದ ಟಿ.ನರಸಿಪುರದ ಸಂತೋಷ್ ಯುಪಿಎಸ್ ಸಿಯಲ್ಲಿ ಉತ್ತಮ ಸಾಧನೆ ಪಡೆದಿದ್ದಾರೆ. ಅವರಿಗೆ ಸಚಿವ ಎಚ್.ಸಿ ಮಹದೇವಪ್ಪ ಶುಭಕೋರಿದ್ದಾರಾ?

ಪ್ರಶ್ನೆ: ಸಿದ್ದರಾಮಯ್ಯ ಮೇಲೆ ನಿಮಗೇಕೆ ಕೋಪ?
ವಿಶ್ವನಾಥ್: ಅವರಿಂದಲೇ ಕಾಂಗ್ರೆಸ್ ಗಿರುವ ಗೌರವ ಮಟ್ಟಕ್ಕೆ ಇಳಿದಿರುವುದು. ಸದ್ಯ ಈಗಿರುವ ಎಲ್ಲ ನಾಯಕರು ಅವರ ಫಾಲೋವರ್ಸ್ ಆಗಿ ಬಿಟ್ಟಿದ್ದಾರೆ. ಅದೇ ದೊಡ್ಡ ಸಮಸ್ಯೆ. ರಾಜ್ಯದಲ್ಲಿರುವುದು ಕಾಂಗ್ರೆಸ್ ಸರಕಾರವೇ ಹೊರತು ಸಿದ್ದರಾಮಯ್ಯನವರ ಸರಕಾರವಲ್ಲ.[ಜೆಡಿಎಸ್ ನಂತೆ ಕಾಂಗ್ರೆಸ್ ಕೂಡ ಅಪ್ಪ-ಮಕ್ಕಳ ಪಕ್ಷ: ವಿಶ್ವನಾಥ್]

ಪ್ರಶ್ನೆ: ಒಟ್ಟಾರೆ ಸಾಧನಾ ಸಮಾವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವಿಶ್ವನಾಥ್: ಸಾರ್ವಜನಿಕ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ನಡೆಸುವ ಹಾಗಿಲ್ಲ. ಆದರೂ ಸಮಾವೇಶ, ಗುದ್ದಲಿ ಪೂಜೆ ಹಾಗೂ ಕಾರ್ಯಕ್ರಮಗಳ ಉದ್ಘಾಟನೆಗೆ ತೆರಿಗೆ ಹಣ ಬಳಸಲಾಗುತ್ತಿದೆ. ಸಾಧನಾ ಸಮಾವೇಶ ಮಾಡಿದ ಯಾವುದೇ ಸರಕಾರ ವಾಪಸ್ ಅಧಿಕಾರಕ್ಕೆ ಬಂದಿಲ್ಲ.
5 ವರ್ಷದಲ್ಲಿ ರೈತರಿಗೆ ಏನು ಕೊಟ್ಟಿದ್ದೀರಿ? ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡಿ, ನೀವು ಅಧಿಕಾರಕ್ಕೆ ಬಂದರೆ ರಾಜ್ಯದ ಖಜಾನೆಗೆ ಹಣ ವಾಪಸ್ ತರುತ್ತೇನೆ ಅನ್ನೋದು ನಿಮ್ಮ ಪ್ರಮುಖ ಭರವಸೆಯಾಗಿತ್ತು. ಆದರೆ ಆ ಕೆಲಸ ಆಯಿತಾ? ಎಸಿಬಿ + ಲೋಕಾಯುಕ್ತ ಇದರಿಂದ ರಾಜ್ಯದ ಬೊಕ್ಕಸಕ್ಕೆ 1000 ಕೋಟಿ ನಷ್ಟವಾಗ್ತಿದೆ. ಇದೇನಾ ನಿಮ್ಮ ಋಣಾತ್ಮಕ ಸರಕಾರದ ಸಾಧನೆ?

ಪ್ರಶ್ನೆ: ನೀವು ಜೆಡಿಎಸ್ ಸೇರ್ಪಡೆಗೊಳ್ಳುತ್ತೀರಾ? ಕಾಂಗ್ರೆಸ್ ತೊರೆಯುವುದು ಯಾವಾಗ?
ವಿಶ್ವನಾಥ್: ನಗುವುದೋ ಅಳುವುದೋ ನೀವೇ ಹೇಳಿ. ಇರುವುದೋ ಬಿಡುವುದೋ ಈ ಊರಿನಲಿ. ಕಾಂಗ್ರೆಸ್ ಮನೆಯಲ್ಲಿ ಇರುವುದೋ ಬಿಡುವುದೋ ತಿಳಿಯುತ್ತಿಲ್ಲ. ಬಹಳ ವೇದನೆಯಿಂದ ಈ ಮಾತು ಹೇಳುತ್ತಿದ್ದೇನೆ. ತುಂಬಾ ನೋವಿನಿಂದ ಈ ಬಗ್ಗೆ ಚಿಂತನೆ ಮಾಡಿದ್ದೇನೆ.
ಕಾಂಗ್ರೆಸ್ ಮನೆಯಲ್ಲಿ ಇರುವುದೋ ಬಿಡುವುದೋ ಅಂತ ಯೋಚನೆ ಮಾಡ್ತಿದ್ದೀನಿ. ರಾಜ್ಯ ಉಸ್ತುವಾರಿ ಮಾಜಿ ಅಧ್ಯಕ್ಷ ದಿಗ್ವಿಜಯ್ ಸಿಂಗ್ ನನ್ನನ್ನು 6 ವರ್ಷ ಅಮಾನತು ಮಾಡಲು ಫೈಲ್ ಸಿದ್ಧ ಮಾಡಿದ್ದರು . ಆದರೆ ಅಧ್ಯಕ್ಷರು ಬದಲಾಗಿ ನಾನು ಕಾಂಗ್ರೆಸ್ನಲ್ಲಿ ಉಳಿದುಕೊಂಡೆ. ಇಲ್ಲವಾಗಿದ್ದರೆ ಆಗಲೇ ನನ್ನನ್ನು ಪಕ್ಷದಿಂದ ತೆಗೆದುಹಾಕಲು ನಿರ್ಧಾರ ಮಾಡಿದ್ದರು.
ಸದ್ಯ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನನ್ನನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾಲವೇ ತೀರ್ಮಾನಿಸಲಿದೆ.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]












Click it and Unblock the Notifications