ಯುವತಿಯ ಕೊಲೆಗೆ ಯತ್ನಿಸಿದ್ದ ಕೊಳಲು ವಾದಕನಿಗೆ ಜೈಲು
ಮೈಸೂರು, ನವೆಂಬರ್ 3: ಯುವತಿಯನ್ನು ಕೊಲ್ಲಲು ಯತ್ನಿಸಿದ್ದ ಕೊಳಲು ವಾದಕ ರಾಕೇಶ್ ಗೆ ೨ನೇ ಹೆಚ್ಚುವರಿ ನ್ಯಾಯಾಲಯ ಬುಧವಾರ ಜೈಲು ಶಿಕ್ಷೆ ವಿಧಿಸಿದೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಯುವತಿಯನ್ನು ಕೊಲ್ಲಲು ಯತ್ನಿಸಿದ ಆರೋಪ ಸಾಬಿತಾಗಿದ್ದು, ಬುಧವಾರ ಕೋಳಲು ವಾದಕ ರಾಕೇಶ್(29)ಗೆ 2 ವರ್ಷ ಜೈಲು ಹಾಗೂ 2.05 ಲಕ್ಷ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೊಳಲು ವಾದಕ ರಾಕೇಶ್ ಮಾಧುರಿ ಅವರಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ, ಇದನ್ನು ನಿರಾಕರಿಸಿದ ಯುವತಿ ಸಾಫ್ಟ್ವೇರ್ ಎಂಜಿನಿಯರೊಬ್ಬರನ್ನು ವಿವಾಹವಾಗಿ ನೆರೆಯ ರಾಜ್ಯದಲ್ಲಿ ನೆಲೆಸಿದ್ದರು. ಇದರಿಂದ ಕುಪಿತಗೊಂಡ ರಾಕೇಶ್ ಯುವತಿಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.[ಸುಪಾರಿ ನೀಡಿದ್ದ ಮೈಸೂರು ಯುವತಿ ಪೊಲೀಸರ ಅತಿಥಿ]

ಮಾಧುರಿ ಹೆಗ್ಗಡೆ ಕಂಪೆನಿ ಸೆಕ್ರೆಟರಿ ಪರೀಕ್ಷೆ ಬರೆಯಲು ಜಯಲಕ್ಷ್ಮಿಪುರಂನ ಮಹಾಜನ ಪದವಿಪೂರ್ವ ಕಾಲೇಜಿಗೆ 2011ರ ಡಿ. 29ರಂದು ಬಂದಿದ್ದರು. ಅಂದು ಮಧ್ಯಾಹ್ನ ಪರೀಕ್ಷೆ ಬರೆದು ಕಾಲೇಜು ಆವರಣದಿಂದ ಹೊರಬರುತ್ತಿದ್ದಾಗ ರಾಕೇಶ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಘಟನೆಯಲ್ಲಿ ಮಾಧುರಿ ಬಲಗೈ ಮಧ್ಯದ ಬೆರಳು ತುಂಡಾಗಿತ್ತು. ಬಲಗೈ, ಎಡಗಾಲು, ಕೆನ್ನೆಗೆ ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಜನತೆ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಲಯ ಆದೇಶ ನೀಡಿದ್ದು, ದಂಡದ ಮೊತ್ತದಲ್ಲಿ ರೂ 2 ಲಕ್ಷವನ್ನು ಸಂತ್ರಸ್ತ ಯುವತಿ ಮಾಧುರಿ ಹೆಗ್ಗಡೆಗೆ ನೀಡುವಂತೆ ಸೂಚಿಸಿದೆ. ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ಅವರು ಒಂದು ತಿಂಗಳು ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದ್ದಾರೆ.[ಮದುವೆಗೆ ಅಡ್ಡಿಯಾದರೆಂದು ಜನ ಬಿಟ್ಟು ಹೊಡೆಸಿದಳೆ ಯುವತಿ?]
ಆಘಾತಕ್ಕೊಳಗಾಗ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕ ಪರಿವಾರ ಸಮೇತ ಅಮೆರಿಕಾಗೆ ತೆರಳಿದರು. ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಾಗಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಡಿ.ಆನಂದಕುಮಾರ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.ಇದನ್ನು ಮನ್ನಿಸಿದ ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂತ್ರಸ್ತೆ ಸಾಕ್ಷ್ಯ ನುಡಿಯಲು ಅವಕಾಶ ಕಲ್ಪಿಸಿದ್ದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೇಳಿಕೆ ಪಡೆದ ಮೊದಲ ಪ್ರಕರಣವಿದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.












Click it and Unblock the Notifications