ನಂಜನಗೂಡಲ್ಲಿ ಹೊತ್ತಿ ಉರಿದ ಸಿಲಿಂಡರ್
ಮೈಸೂರು, ಜನವರಿ 12: ನಂಜನಗೂಡಿನ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆ ಹೊತ್ತಿ ಉರಿದಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದರಾದರೂ ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ನಂಜನಗೂಡಿನ ರಾಮಸ್ವಾಮಿ ಬಡಾವಣೆಯ ಶಿಕ್ಷಕರಾದ ಕೆ.ಮಹೇಶ್ ಎಂಬುವರ ಮನೆಯಲ್ಲಿ ನಡೆದಿದೆ. ಮಹೇಶ್ ಹಾಗೂ ಅವರ ಪತ್ನಿ ಶಿಕ್ಷಕರಾಗಿದ್ದು ಎಂದಿನಂತೆ ಅವರು ಬುಧವಾರ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ವೃದ್ದರಾದ ಕೃಷ್ಣಮೂರ್ತಿವೊಬ್ಬರೇ ಇದ್ದರು ಎನ್ನಲಾಗಿದೆ. ಅವರು ಅಡುಗೆ ಮಾಡಲೆಂದು ಮನೆಯೊಳಕ್ಕೆ ಹೋಗಿದ್ದು, ಸಿಲಿಂಡರ್ ಖಾಲಿಯಾಗಿದ್ದರಿಂದ ಮತ್ತೊಂದು ಸಿಲಿಂಡರ್ ರೆಗ್ಯುಲೆಟರ್ ಜೋಡಣೆ ಮಾಡಿದ್ದಾರೆ. ಆದರೆ ಅದು ಸರಿಯಾಗಿ ಆಗದ್ದರಿಂದ ಗ್ಯಾಸ್ ಸೋರಿಕೆಯಾಗಿದೆ.
ಅದನ್ನು ಗಮನಿಸದೆ ಸ್ಟೌವ್ ಉರಿಸಿದ್ದರಿಂದ ಬೆಂಕಿ ಹತ್ತಿಕೊಂಡು ಉರಿಯ ತೊಡಗಿದೆ. ಪರಿಣಾಮ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್, ಮಿಕ್ಸಿ ಸೇರಿದಂತೆ ಪದಾರ್ಥಗಳು ಸುಟ್ಟು ಕರಕಲಾಗಿದೆ. ಆದರೆ ಧೈರ್ಯ ಮಾಡಿ ಕೃಷ್ಣಮೂರ್ತಿ ಅವರು ಉರಿಯುತ್ತಿದ್ದ ಸಿಲಿಂಡರ್ನ್ನು ಹೊರಗೆ ಎಸೆದಿದ್ದಾರೆ.
ಈ ಸಂದರ್ಭ ಅವರಿಗೆ ಸುಟ್ಟ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ ಸುತ್ತಮುತ್ತಲಿನ ಜನ ಸೇರಿದ್ದರಾದರೂ ಏನಾಗುತ್ತದೆಯೋ ಎಂಬ ಭಯದಲ್ಲಿ ಗರಬಡಿದಂತೆ ನಿಂತಿದ್ದು ಕಂಡು ಬಂತು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದರಿಂದ ಜನ ನೆಮ್ಮದಿಯುಸಿರು ಬಿಡುವಂತಾಯಿತು.