ಮೈಸೂರಿನಲ್ಲಿ ಅಕ್ರಮ ಪಟಾಕಿ ತಯಾರಿಕೆ ವೇಳೆ ಸ್ಫೋಟ: 7 ಜನರಿಗೆ ಗಾಯ
ಮೈಸೂರು, ಜನವರಿ 29: ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದ ಸಂದರ್ಭ ಬೆಂಕಿ ತಗುಲಿ ಪಟಾಕಿ ಸಿಡಿದಿದ್ದರಿಂದ ಏಳು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಮಲ್ಲನಾಯಕ (60), ಹರೀಶ್ (35), ದೇವರಾಜು (17), ದರ್ಶನ್ (14) ಅಪ್ಪು (14), ಕುಮಾರಸ್ವಾಮಿ (13), ಮಧು (13) ಅವರು ಘಟನೆಯಲ್ಲಿ ಗಾಯಗೊಂಡವಾರಾಗಿದ್ದಾರೆ.
ಇವರು ಮಾಪಾಪುರ ಗ್ರಾಮದ ಮನೆಯೊಂದರಲ್ಲಿ ಪಟಾಕಿ ತಯಾರಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪಟಾಕಿ ಸಿಡಿದಿದ್ದರಿಂದ ಭಾರೀ ಶಬ್ದ ಹೊರಬಂದಿದೆ.

ಶಬ್ದ ಕೇಳಿದ ಜನ ಅತ್ತ ಓಡಿ ಹೋಗಿ ನೋಡಿದಾಗ ಮನೆಯೊಳಗೆ ಸುಟ್ಟಗಾಯಗಳಿಂದ ನರಳುತ್ತಿರುವ ಶಬ್ದ ಕೇಳಿಬಂದಿತ್ತು. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಒಳಗಿದ್ದ ಏಳು ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ಅವರು ಗಂಭೀರ ಗಾಯಗೊಂಡಿದ್ದರಿಂದ ಮೊದಲಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟಾಕಿ ತಯಾರಿಸುತ್ತಿದ್ದ ಮನೆಯ ಪಕ್ಕದಲ್ಲಿ ಬೇರೆ ಯಾವುದೇ ಮನೆಗಳು ಇಲ್ಲದ್ದರಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ.
ಇಲ್ಲಿ ಏಕೆ ಪಟಾಕಿ ತಯಾರಿಸಲಾಗುತ್ತಿತ್ತು? ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪಟ್ಟಣ ಠಾಣೆ ಪಿಎಸ್ಐ ವಿ.ಸಿ.ಅಶೋಕ್, ಎಎಸ್ಐ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದದ್ದಾರಲ್ಲದೆ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications