ನಂಜನಗೂಡಲ್ಲಿ ಕಾಂಗ್ರೆಸಿಗೆ ಅಭ್ಯರ್ಥಿಗಳೇ ಇಲ್ವಾ? ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಡಗೂರು ವಿಶ್ವನಾಥ್, ಕೇಂದ್ರ ಬಜೆಟ್, ಎಸ್.ಎಂ ಕೃಷ್ಣಾ ರಾಜೀನಾಮೆ, ಹಾಗೂ ನಂಜನಗೂಡು ಉಪಚುನಾವಣೆ ಬಗ್ಗೆ ಮಾತನಾಡಿದ್ದಾರೆ.
ಮೈಸೂರು, ಫೆಬ್ರವರಿ 2 : ನಂಜನಗೂಡಲ್ಲಿ ಬೇರೆ ಪಕ್ಷದವರನ್ನು ಕರೆತಂದು ಕಾಂಗ್ರೆಸಿನಿಂದ ಟಿಕೆಟ್ ನೀಡಬಾರದು. ಕಾಂಗ್ರೆಸ್ ನಲ್ಲೇನು ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ರನ್ನು ಮಾಜಿ ಸಂಸದ ಅಡಗೂರು ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್, ಎಸ್.ಎಂ ಕೃಷ್ಣಾ ರಾಜೀನಾಮೆ ಹಾಗೂ ನಂಜನಗೂಡು ಉಪಚುನಾವಣೆ ಬಗ್ಗೆ ಮಾತನಾಡಿದ್ದಾರೆ.[ಮಹದೇವಪ್ಪ ಮನೆಯಲ್ಲಿ ಕಳಲೇ ಕೇಶವಮೂರ್ತಿಯವರಿಗೆ ಏನು ಕೆಲಸ?]
ಈ ಬಾರಿಯ ಬಜೆಟ್ನಲ್ಲಿ ಒಳ್ಳೆಯ ಹಾಗೂ ಕೆಟ್ಟ ಅಂಶಗಳು ಎರಡೂ ಇದೆ. ಆದರೆ ಅಭಿವೃದ್ಧಿಗೆ ಪೂರಕವಾಗುವ ಅಂಶಗಳು ಬಜೆಟ್ನಲ್ಲಿ ಕಂಡು ಬಂದಿಲ್ಲ ಎಂದಿದ್ದಾರೆ. "ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಇದೊಂದು ಅಪೂರ್ಣ ಬಜೆಟ್. ಮೋದಿ ಹೇಳುವ ಪ್ರಕಾರ ಬಜೆಟ್ನಲ್ಲಿ ಅಚ್ಛೆ ದಿನ್ ಬದಲಿಗೆ ಅಚ್ಛೆ ಇದೆ, ಆದರೆ ದಿನ್ ಇಲ್ಲ," ಎಂದು ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.[ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಲ್ಲದ ಬಜೆಟ್:ಸಿದ್ದರಾಮಯ್ಯ]

ಬಜೆಟ್ ನಲ್ಲಿ ಸ್ಪಷ್ಟತೆ ಇಲ್ಲ
ನರೇಗಾ ಯೋಜನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಗ್ರಾಮೀಣಾಭಿವೃದ್ಧಿಗೆಂದು ನೀಡಲಾಗುತ್ತಿರುವ 10 ಲಕ್ಷ ಕೋಟಿ ರೂಪಾಯಿ ಯಾವ ಇಲಾಖೆಗೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಬಜೆಟ್ಗೂ ಮುನ್ನವೇ ಈ ಹಣ ಯಾವ ಇಲಾಖೆಗೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು ಎಂದು ಹೇಳಿದರು.

ಮೈಸೂರಿಗೆ ಏನೂ ಇಲ್ಲ
ಇನ್ನೂ ರೈಲ್ವೆ ಬಜೆಟ್ನಲ್ಲಿ ಈ ಬಾರಿ ಮೈಸೂರಿಗೆ ಬಿಡಿಗಾಸು ನೀಡಿಲ್ಲ. ಹೊಸ ರೈಲು ವ್ಯವಸ್ಥೆ ಇಲ್ಲ. ಮೋದಿ ಈ ಹಿಂದೆ ಬಜೆಟ್ ಮಂಡಿಸಿದಾಗ ಬುಲೆಟ್ ರೈಲಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ ಈ ಬಜೆಟ್ನಲ್ಲಿ ಅದರ ಪ್ರಸ್ತಾಪ ಮಾಡಿಲ್ಲ. ಮೈಸೂರು-ಕುಶಾಲನಗರಕ್ಕೆ ರೈಲು ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿ ಈಗ ಅದನ್ನು ಕೈಬಿಟ್ಟಿದ್ದಾರೆ. ಸ್ವಿಸ್ ಬ್ಯಾಂಕ್ನಿಂದ ಹಣ ತರುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನೋಟ್ ಬ್ಯಾನ್ನಿಂದಾಗಿ ಎಷ್ಟು ಅಕ್ರಮ ಹಣ ಸಂಗ್ರಹವಾಗಿದೆ. ಅದನ್ನು ಯಾವುದಕ್ಕೆ ವಿನಿಯೋಗ ಮಾಡುತ್ತೇವೆ ಎಂಬುದನ್ನೂ ತಿಳಿಸಿಲ್ಲ ಎಂದು ಅವರು ಹೇಳಿದರು.

ಪರಮೇಶ್ವರ್ ಗೆ ಮಾನ ಮರ್ಯಾದೆ ಇದೆಯಾ?
ನಂಜನಗೂಡು ಉಪಚುನಾವಣೆಯಲ್ಲಿ ಜನತಾದಳದ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಗೆ ಕರೆತಂದು ಟಿಕೆಟ್ ನೀಡಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮಾನ ಮರ್ಯಾದೆ ಇದೆಯೇ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.

ಕಾಂಗ್ರೆಸಿನಲ್ಲಿ ಅಭ್ಯರ್ಥಿಗಳಿಲ್ವಾ?
"ಬೇರೆ ಪಕ್ಷದವರನ್ನು ಕಾಂಗ್ರೆಸ್ಗೆ ಕರೆತರುವ ಅನಿವಾರ್ಯವಾದರೂ ಏನಿದೆ? ಕಾಂಗ್ರೆಸ್ನಲ್ಲಿರುವವರು ನಿಮಗೆ ಕಾಣುವುದಿಲ್ಲವೇ? ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ನಿಲ್ಲುವವರು ಕಾಂಗ್ರೆಸ್ನಲ್ಲಿ ಯಾರೂ ಇಲ್ಲವೇ? ಪರಮೇಶ್ವರ್ ಅವರೇ ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ. ನೀವು ಯಾವ ಪಕ್ಷದ ಅಧ್ಯಕ್ಷರು?" ಎಂದು ವಿಶ್ವನಾಥ್ ಪ್ರಶ್ನಿಸಿದರು.
ನಂಜನಗೂಡಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಅಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಒಂದು ವೇಳೆ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸರ್ಕಾರ ಕೆಳಗಿಳಿಯುತ್ತಾ? ಎಂದು ವಿಶ್ವನಾಥ್ ಸವಾಲೆಸೆದಿದ್ದಾರೆ.

ಕಾಂಗ್ರೆಸ್ ಎಲ್ಲರಿಗೂ ಅನಿವಾರ್ಯ
ಎಸ್ ಎಂ.ಕೃಷ್ಣ ಅವರು ಗೌರವ, ಸ್ವಾಭಿಮಾನಕ್ಕೆ ಚ್ಯುತಿ ಬಂದಿದ್ದರಿಂದ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಸಕ್ರಿಯ ರಾಜಕಾರಣದಿಂದ ದೂರ ಉಳಿದಿಲ್ಲ ಎಂದು ಹೇಳಿದ್ದಾರೆ. ಇದು ಬಹಳಷ್ಟು ಅರ್ಥ ತಿಳಿಸುತ್ತದೆ. ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಸೇರಿದಂತೆ ಕಾಂಗ್ರೆಸ್ಗೆ ಯಾರೂ ಅನಿವಾರ್ಯವಲ್ಲ. ಆದರೆ ಕಾಂಗ್ರೆಸ್ ಎಲ್ಲರಿಗೂ ಅನಿವಾರ್ಯ. ಕೃಷ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಸ್ವಾಗತಾರ್ಹ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಕುರುಬರ ಸರ್ಕಾರವಲ್ಲ
ಜಾಫರ್ ಷರೀಫ್ ಅವರು ಕಾಂಗ್ರೆಸ್ ಸರ್ಕಾರ ಕುರುಬರ ಸರ್ಕಾರ ಎಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನು ಬೇಕಾದರೆ ಟೀಕಿಸಲಿ. ಆದರೆ ಹೀಗೆ ಜಾತಿಯನ್ನು ಬೈಯುವುದು ಸರಿಯಲ್ಲ. ವಿಶ್ವನಾಥ್ ಅವರು ಜಾತಿವಾದಿ ಎಂದು ನನ್ನ ಬಗ್ಗೆ ಕೂಡ ಟೀಕೆ ಮಾಡಿದ್ದಾರೆ. ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದವನು ನಾನು. ನಾನು ಜಾತಿವಾದಿಯಲ್ಲ. ಮೂಲೆಗುಂಪಾಗಿರುವ ಜಾತಿಗಳನ್ನು ಹುಡುಕಿ ಅವರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಕುರುಬ ಸರ್ಕಾರ ಎಂದು ಹೇಳುವ ಇವರು ಸರ್ಕಾರದಲ್ಲಿ ಎಷ್ಟು ಮಂದಿ ಡಿಸಿ, ಮಂತ್ರಿ, ಐಎಎಸ್, ಐಪಿಎಸ್ ಅಧಿಕಾರಿಗಳು ಕುರುಬರಿದ್ದಾರೆ ಎಂಬುದನ್ನು ತೋರಿಸಲಿ ಎಂದು ತಿರುಗೇಟು ನೀಡಿದರು.












Click it and Unblock the Notifications