ಸಾಲು ಸಾಲು ಬೇಡಿಕೆಯೊಂದಿಗೆ ದೆಹಲಿಯ ಕಿಸಾನ್ ಮಹಾಪಂಚಾಯತ್ಗೆ ಹೊರಟ ಮೈಸೂರಿನ ರೈತರು
ಮೈಸೂರು, ಸೆಪ್ಟೆಂಬರ್ 21: ಸೆಪ್ಟೆಂಬರ್ 23ರಂದು ದೆಹಲಿಯಲ್ಲಿ ನಡೆಯುವ ಕಿಸಾನ್ ಮಹಾಪಂಚಾಯತ್ಗೆ ಮೈಸೂರಿನ ರೈತರು ಪ್ರಯಾಣ ಬೆಳೆಸಿದ್ದಾರೆ. ಕರ್ನಾಟಕದಿಂದ ಸುಮಾರು 500ಕ್ಕೂ ಹೆಚ್ಚು ರೈತರು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುವ ಕಿಸಾನ್ ಮಹಾಪಂಚಾಯತ್ನಲ್ಲಿ ಭಾಗವಹಿಸಲಿದ್ದಾರೆ.
ನಮ್ಮ ದೇಶ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿದೆ ಆದರೆ ರೈತರು ಮತ್ತು ಕೃಷಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಕೃಷಿ ಲಾಭದಾಯಕವಲ್ಲವೇ ಅಲ್ಲ ಅದು ರೈತರನ್ನು ಸಾಲದ ಬಲೆಗೆ ಸಿಲುಕಿಸುತ್ತಿದೆ. ರೈತರು ಯಾವಾಗಲೂ ಬೆಲೆ ಕುಸಿತದ ವಿದ್ಯಮಾನವನ್ನು ಎದುರಿಸುತ್ತಿದ್ದಾರೆ. ಮತ್ತು ಅವರು ಕೃಷಿ ಉತ್ಪಾದನೆಯನ್ನು ತೀರಾ ಕಡಿಮೆ ಬೆಲೆಗೆ ಮಾರಿಕೊಳ್ಳುವಂತಾಗಿದೆ.

ರೈತರು ಬಹಳ ಕಾಲದಿಂದ ಇಟ್ಟಿರುವ ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಸೂತ್ರದ ಅಡಿಯಲ್ಲಿ ಉತ್ಪಾದನಾ ವೆಚ್ಚವನ್ನು ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಕಾನೂನು ಬದ್ಧಗೊಳಿಸಿಲ್ಲ. ಕೃಷಿಗೆ ಬಳಸುವ ಬೀಜ , ರಸಗೊಬ್ಬರ, ಮತ್ತು ಯಂತ್ರೋಪಕರಣಗಳು, ಕೃಷಿ ಉತ್ಪಾದನಾ ವೆಚ್ಚ, ಇವೆಲ್ಲವೂ ಏಕಸ್ವಾಮ್ಯದಿಪತಿಗಳ ಹಿಡಿತದಲ್ಲಿರುವುದರಿಂದ ಎಲ್ಲದರ ವೆಚ್ಚ ಅಡೆತಡೆಯಿಲ್ಲದೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ರೈತ ಸಾಲದ ಬಲೆಗೆ ಸಿಲುಕಿ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾನೆ ಎಂದು ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ.
ರೈತರು ತಮ್ಮ ಭೂಮಿಗಳನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಈ ಕೃಷಿ ಕಾರ್ಮಿಕರಿಗೆ ಹಳ್ಳಿಯಲ್ಲಿ ಕೆಲಸವಿಲ್ಲ. ಅವರೆಲ್ಲ ನಗರಗಳಿಗೆ ಬಲವಂತವಾಗಿ ವಲಸೆ ಕಾರ್ಮಿಕರಾಗಿ ತಳ್ಳಲ್ಪಟ್ಟಿದ್ದಾರೆ. ಇತ್ತ ನಗರಗಳಲ್ಲೂ ಕೆಲಸವಿಲ್ಲದೆ ಅವರ ಜೀವನ ಕಷ್ಟದಲ್ಲಿ ಸಿಲುಕಿದೆ.

ನಮ್ಮ ದೇಶದಲ್ಲಿ ಜಾರಿಗೆ ಬಂದ ಜಾಗತೀಕರಣ ಖಾಸಗೀಕರಣ ನೀತಿಗಳಿಂದಾಗಿ, ರೈತರಿಗೆ ಸಿಗುವ, ಎಲ್ಲಾ ಸಬ್ಸಿಡಿಗಳನ್ನು ಕಡಿತ ಮಾಡಿ, ಬಂಡವಾಳಿಗರಿಗೆ ದಾರಿಎರಿದ ಪರಿಣಾಮ ಈ ಎಲ್ಲಾ ದುಃಖ ಮತ್ತು ಸಂಕಟಗಳಿಗೆ ಕಾರಣವಾಗಿದೆ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ, ಮಾಲೀಕರ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ದುರಾಸೆಯನ್ನು ಪೂರೈಸಲು ಒಂದರ ನಂತರ ಒಂದರಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅವರ ದಬ್ಬಾಳಿಕೆ ಮತ್ತು ನಿಗ್ರಹಕ್ಕೆ ಯಾವುದೇ ಮಿತಿ ಇಲ್ಲ.
ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಲು ಅವರು ಸಾಮಾನ್ಯ ರೈತರು ಮತ್ತು ಕೃಷಿ ಕಾರ್ಮಿಕರ ಹೆಗಲ ಮೇಲೆ ದಾಳಿ ಮಾಡುತ್ತಿದೆ. ಈ ಎಲ್ಲಾ ರೈತ ಕಾರ್ಮಿಕ ವಿರೋಧಿ ನೀತಿಗಳಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರ್ಪೊರೇಟ್ ಮನೆತನಗಳ ಪಾದ ಸೇವೆ ಮಾಡುವ ಪಕ್ಷಗಳೆಂಬುವುದು ಅವರ ನೀತಿಗಳಿಂದ ಸಾಬೀತಾಗಿದೆ ಎಂದು ರೈತರು ಕಿಡಿಕಾರಿದ್ದಾರೆ.
ರೈತರು ಮತ್ತು ಕೃಷಿ ಕಾರ್ಮಿಕರಿಗೆ ಹೋರಾಟ ಬಿಟ್ಟು ಬೇರೆ ದಾರಿ ಇಲ್ಲ. ಅದಕ್ಕೆ ಸಾಕ್ಷಿ ದೆಹಲಿಯ ಗಡಿಯಲ್ಲಿ ರೈತರು 13 ತಿಂಗಳ ವೀರೋಚಿತ ಹೋರಾಟವನ್ನು ನಡೆಸಿ, 250 ರೈತರು ತಮ್ಮ ಈ ಉದ್ದೇಶಕ್ಕಾಗಿ ಸಾವನ್ನು ನಗುಮೊಗದಿಂದ ಸ್ವೀಕರಿಸಿರುವುದನ್ನು ನಾವು ನೋಡಿದ್ದೇವೆ. ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಅವರ ಏಜೆಂಟರಾದ ಕೇಂದ್ರ ಬಿಜೆಪಿ ಸರ್ಕಾರ, ರೈತರ ಹೋರಾಟಕ್ಕೆ ಮಣಿದು ತಲೆಬಾಗಿ ಮೂರು ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲೇಬೇಕಾಯಿತು.
ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರವು ಆರು ತಿಂಗಳ ಒಳಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆಯನ್ನು ನೀಡುವುದಾಗಿ, ಹುತಾತ್ಮ ರೈತರಿಗೆ ಪರಿಹಾರ ನೀಡುವುದಾಗಿ ಮತ್ತು ದೆಹಲಿ ರೈತ ಹೋರಾಟದ ಸಮಯದಲ್ಲಿ ರೈತರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯುವುದಾಗಿ ಲಿಖಿತ ಭರವಸೆ ನೀಡಿ ಬೇಡಿಕೆ ಈಡೇರಿಸದೇ ರೈತರಿಗೆ ದ್ರೋಹ ಬಗೆದಿದೆ. ಆದರೆ ರೈತರು ದೇಶದ್ಯಾಂತ ಬಲಿಷ್ಠ ಹೋರಾಟ ಮುಂದುವರೆಸಿರುವುದು, ರೈತರು ಅಸಹಾಯಕರಲ್ಲ ಹಾಗೂ ರೈತರು ಬಹುರಾಷ್ಟ್ರೀಯ ಮತ್ತು ಅವರ ಹಿಂಬಾಲಕರನ್ನು ಅದಮ್ಯ ಸ್ಪೂರ್ತಿಯಿಂದ ಎದುರಿಸಬಹುದು ಎಂಬುವುದು ಮತ್ತೊಮ್ಮೆ ಸಾಬೀತುಪಡಿಸಿದೆ. ನಮ್ಮ ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು ಪೂರ್ಣವಾಗಿ ಈಡೇರಿಸುವಂತೆ ಒತ್ತಾಯಿಸಲು ಈ ಹೋರಾಟ ಮುಂದುವರೆಯಲಿದೆ ಎಂದು ರೈತರು ತಿಳಿಸಿದ್ದಾರೆ.












Click it and Unblock the Notifications