ದೇಶ ಕಂಡ ಅತಿ ಕೆಟ್ಟ ಪ್ರಧಾನಿ ನರೇಂದ್ರ ಮೋದಿ: ಬಡಗಲಪುರ ನಾಗೇಂದ್ರ
ಮೈಸೂರು, ಆಗಸ್ಟ್ 23: "ರಾಜ್ಯದಲ್ಲಿ ಬರ ಹಾಗೂ ನೆರೆ ಪರಿಸ್ಥಿತಿ ಇದ್ದರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇರುವುದು ಅವರ ಕೆಟ್ಟತನವನ್ನು ಪ್ರದರ್ಶಿಸುತ್ತದೆ" ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಆಗಮಿಸಬೇಕಿತ್ತು. ಒಡಿಶಾದಲ್ಲಿ ನೆರೆ ಆವರಿಸಿದಾಗ ಚುನಾವಣೆ ಪ್ರಚಾರ ನಿಲ್ಲಿಸಿ ತುರ್ತು ವೈಮಾನಿಕ ಸಮೀಕ್ಷೆ ನೆಡೆಸಿ ಅಲ್ಲಿನ ಸಿಎಂ ಅವರನ್ನು ಭೇಟಿಯಾಗಿ ನೆರವು ಘೋಷಿಸಿದ್ದರು. ದಕ್ಷಿಣ ಭಾರತದ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ನಿರ್ಲಕ್ಷಿಸಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಮೋದಿ ನಡೆಗೆ ರೈತ ಸಂಘ ಖಂಡಿಸುತ್ತದೆ" ಎಂದರು.
"ರಾಜ್ಯದಲ್ಲಿ ಬಿಜೆಪಿ ನಾಯಕರ ಪ್ರವಾಸ ನೆಪವಷ್ಟೇ. ಇದರಿಂದ ರಾಜ್ಯದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ಆದರೆ ಇದರಿಂದ ರಾಜ್ಯದ ರೈತರಿಗೆ ಯಾವುದೇ ಉಪಯೋಗವಿಲ್ಲ" ಎಂದು ಸಚಿವರ ಭೇಟಿಗೆ ಬಡಗಲಪುರ ನಾಗೇಂದ್ರ ಟೀಕಿಸಿದರು.
ಸಿದ್ದಗಂಗಾ ಮಠದಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ಪರಿಹಾರ; ಸಿಎಂಗೆ ಚೆಕ್ ಹಸ್ತಾಂತರ
"ಇದೇ ಆ.27ರಂದು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದೇವೆ. ಕೇಂದ್ರ ಸಂಪೂರ್ಣ ನೆರೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನೆರೆ ಸಂತ್ರಸ್ತರೊಟ್ಟುಗೂಡಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.