ಮುಳುಗುವ ಭೀತಿಯಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ
Recommended Video

ಮೈಸೂರು, ಆಗಸ್ಟ್ 16 : ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿಗೆ 1.20 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದ್ದು, ಶ್ರೀರಂಗಪಟ್ಟಣದ ಸಮೀಪವಿರುವ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಹಂತ ತಲುಪಿದೆ. ನದಿ ಮಟ್ಟದಿಂದ 30 ಅಡಿ ಎತ್ತರದ ಸೇತುವೆಯ ತಳ ಭಾಗದವರೆಗೆ ನೀರು ತುಂಬಿ ಹರಿಯುತ್ತಿದೆ.
ಇನ್ನು ಹತ್ತಿಪ್ಪತ್ತು ಸಾವಿರ ಕ್ಯುಸೆಕ್ ನೀರು ಹೆಚ್ಚಾದರೆ ಸೇತುವೆ ಮುಳುಗಲಿದೆ. 15 ದಿನಗಳ ಹಿಂದಿನ ಪ್ರವಾಹದ ವೇಳೆ ಕೊಚ್ಚಿ ಬಂದ ಅಪಾರ ಪ್ರಮಾಣದ ಹುಲ್ಲಿನ ತ್ಯಾಜ್ಯ ಸೇತುವೆಯ ಕಲ್ಲುಗಳಿಗೆ ಸಿಕ್ಕಿಕೊಂಡಿದೆ. ನೀರಿನ ಸರಾಗ ಹರಿವಿಗೆ ಇದು ಅಡ್ಡಿಯಾಗಿದ್ದು, ಸೇತುವೆಯ ಮೇಲೆ ನೀರು ಬರುವ ಭೀತಿ ಎದುರಾಗಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ (1800-02) ನಿರ್ಮಾಣವಾದ ಈ ಸೇತುವೆ 160 ವರ್ಷಗಳ ಕಾಲ ಬೆಂಗಳೂರು- ಮೈಸೂರು ನಗರಗಳ ನಡುವೆ ಪ್ರಮುಖ ಸಂಪರ್ಕ ಕೊಂಡಿ ಆಗಿತ್ತು.
ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಅಂಬೇಡ್ಕರ್ ಭವನದ ಬಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮವೂ ಜಲಾವೃತವಾಗಿದೆ.

ಕಾವೇರಿಪುರ ಬಡಾವಣೆಯ ಶನೀಶ್ವರ ಸ್ವಾಮಿ ದೇವಾಲಯ ಭಾಗಶಃ ಮುಳುಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ನಡುಗಡ್ಡೆಗಳು ಮುಳುಗಿದ್ದು, ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಪಕ್ಷಿಗಳಿಗೆ ಯಾವುದೇ ಅಪಾಯ ಇಲ್ಲ ಎಂದು ಪಕ್ಷಿಧಾಮದ ಆರ್ಎಫ್ಒ ಪುಟ್ಟಮಾದೇಗೌಡ ತಿಳಿಸಿದ್ದಾರೆ.
ಇತ್ತ ಗದ್ದೆ ಹಾಗೂ ಗ್ರಾಮಗಳಿಗೂ ನೀರು ನುಗ್ಗಿದ್ದು, ನದಿ ಪಾತ್ರದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಟಿ.ನರಸೀಪುರ ತಾಲೂಕಿನ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದ್ದು, ಟಿ.ನರಸೀಪುರ- ತಲಕಾಡು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ.

ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆ ಮುಂಭಾಗದಲ್ಲಿ ಹೆಮ್ಮಿಗೆ ಸೇತುವೆ ಇದ್ದು, ಕೆಆರ್ ಎಸ್ ನಿಂದ ಒಂದೂವರೆ ಲಕ್ಷ, ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಇತ್ತ ಹಾರಂಗಿ ಡ್ಯಾಮ್ ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.












Click it and Unblock the Notifications