ಯಾವಾಗ ಬರ್ತೀಯಾ ಮಗ..ಮೈಸೂರು ಯೋಧ ಕುಟುಂಬದ ರೋದನ
ಮೈಸೂರು,ಫೆಬ್ರವರಿ,15: ಹೆತ್ತ ಕರುಳು ಯಾವಾಗ ಬರ್ತಿಯಾ ಮಗನೇ ಎಂದು ಕೇಳುತ್ತಿದೆ. ಜೀವಂತವಾಗಿ ನಿನ್ನನ್ನು ನೋಡಿಲ್ಲ ಕೊನೆಗೊಮ್ಮೆ ಮುಖ ನೋಡಿಯಾದರೂ ಪ್ರಾಣ ಬಿಡ್ತೀನಿ ಎಂದು ರೋಧಿಸುತ್ತಿದೆ. ಆ ಮನೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಕಣ್ಣೀರಷ್ಟೇ ಉತ್ತರ.
ಸಿಯಾಚಿನ್ ಯುದ್ಧಭೂಮಿಯಲ್ಲಿ ಹಿಮಪಾತದಿಂದ ಹುತಾತ್ಮರಾದ ಯೋಧ ಪಿ.ಎನ್.ಮಹೇಶ್ ಅವರ ಪಾರ್ಥೀವ ಶರೀರ ಈಗಾಗಲೇ ನವದೆಹಲಿ ತಲುಪಿದ್ದು, ಸಂಜೆ ಒಳಗೆ ಮೈಸೂರಿಗೆ ಬರುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ. ಕುಟುಂಬಸ್ಥರು ಮತ್ತು ಸಾರ್ವಜನಿಕರು ಎಲ್ಲ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ. [ಕಾಶ್ಮೀರ ಗಡಿಯಲ್ಲಿ ಪ್ರಾಣ ಅರ್ಪಿಸಿದ ಮತ್ತೊಬ್ಬ ಕನ್ನಡಿಗ]

ಮೂಲತಃ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ನಿವಾಸಿಯಾಗಿದ್ದ ಇವರು ಬಳಿಕ ಎಚ್.ಡಿ.ಕೋಟೆಯಲ್ಲಿ ನೆಲೆ ನಿಂತಿದ್ದರು. ಈ ಎರಡು ಊರಿನಲ್ಲಿಯೂ ಮಹೇಶ್ ಅವರ ಒಡನಾಟವಿತ್ತು. ಹುಟ್ಟೂರಾದ ಕೆ.ಆರ್.ನಗರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಹೆಚ್.ಡಿ.ಕೋಟೆಯಲ್ಲಿ ಮಹೇಶ್ ಅವರ ಸ್ಮಾರಕ ಕಟ್ಟುವ ಮಾತುಗಳು ಕೂಡ ಗೆಳೆಯರ ವಲಯದಲ್ಲಿ ಕೇಳಿ ಬಂದಿದೆ.
ಹೆಚ್.ಡಿ.ಕೋಟೆಯಲ್ಲಿ ಸುಮಾರು 25 ವರ್ಷಗಳಿಂದಲೂ ವಾಸವಿದ್ದು, ಸ್ವಂತ ಜಾಗವಿಲ್ಲ, ಹಾಗಾಗಿ ಮಗನ ಅಂತ್ಯಕ್ರಿಯೆಯನ್ನು ನನ್ನ ಪತಿಯ ಗ್ರಾಮವಾದ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದಲ್ಲಿ ನೆರವೇರಿಸಲು ಕುಟುಂಬದಲ್ಲಿ ತೀರ್ಮಾನ ಮಾಡಿರುವುದಾಗಿ ಯೋಧನ ತಾಯಿ ಸರ್ವಮಂಗಳ ಹೇಳುತ್ತಿದ್ದಾರೆ.[ಸಿಯಾಚಿನ್ ಭೀಕರತೆ ಎದುರಿಸಿ ಸಾವು ಗೆದ್ದ ಕೊಡಗಿನ ಯೋಧರು]

ಹುತಾತ್ಮ ಯೋಧ ಪಿ.ಎನ್.ಮಹೇಶ್ ಅವರ ಅಂತಿಮದರ್ಶನಕ್ಕೆ ಹೆಚ್.ಡಿ.ಕೋಟೆ ಜೂನಿಯರ್ ಕಾಲೇಜಿನ ಮೈದಾನದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಈಗಾಗಲೇ ಅಲ್ಲಿನ ತಹಸೀಲ್ದಾರ್ ಎಂ.ನಂಜುಂಡಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅರಸ್, ಚುನಾವಣಾಧಿಕಾರಿ ಡಾ.ಕಾ.ರಾಮೇಶ್ವರಪ್ಪ, ವೃತ್ತ ನಿರೀಕ್ಷಕ ವಿ.ಎಸ್.ಹಾಲ್ಮೂರ್ತಿರಾವ್ ಪರಿಶೀಲಿಸಿದ್ದಾರೆ.[ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]
ಮೈಸೂರಿಗೆ ಆಗಮಿಸುವ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ಸಲ್ಲಿಸಿ ಬಳಿಕ ಹೆಚ್.ಡಿ.ಕೋಟೆಗೆ ಕೊಂಡೊಯ್ದು ಸಾರ್ವಜನಿಕ ದರ್ಶನದ ಬಳಿಕ ಹುಟ್ಟೂರು ಕೆ.ಆರ್.ನಗರದ ಪಶುಪತಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications