ಬ್ಯಾಂಕ್ ಅಧಿಕಾರಿ ಅಂದವನೇ ಫೋನ್ ಮೂಲಕವೇ 13.500 ರುಪಾಯಿಗೆ ನಾಮವಿಟ್ಟ
ಮೈಸೂರು, ಜೂನ್ 15 : "ನಿಮಗೆ ಆದಿತ್ಯ ಬಿರ್ಲಾ ಕಂಪೆನಿಯಿಂದ ಉಡುಗೊರೆಯ ವೋಚರ್ ಬಂದಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಪರಿಶೀಲಿಸಬೇಕಿದೆ" ಎಂದು ಹೇಳಿ ಮಹಿಳೆಯೊಬ್ಬರಿಂದ ಒಟಿಪಿ ಸಂಖ್ಯೆ ಪಡೆದ ದುಷ್ಕರ್ಮಿಗಳು, ಆಕೆಯ ಖಾತೆಯಲ್ಲಿದ್ದ 13.500 ರುಪಾಯಿ ಆನ್ ಲೈನ್ ಮೂಲಕ ಡ್ರಾ ಮಾಡಿ, ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೆ.ಜಿ.ಕೊಪ್ಪಲು ನಿವಾಸಿ ಪಿ.ಶಿವಕುಮಾರ್ ಎಂಬವರ ಪತ್ನಿ ಕೆ.ಅಶ್ವಿನಿ ವಂಚಕರ ಜಾಲದಲ್ಲಿಹಣ ಕಳೆದುಕೊಂಡವರು. ಬೆಂಗಳೂರಿನ ಕೆಪಿಎಸ್ ಸಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಅಶ್ವಿನಿ ಅವರ ಮೊಬೈಲ್ ಫೋನ್ ಗೆ ಕಳೆದ ಶನಿವಾರ ಸಂಜೆ 4.17ರ ವೇಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿದೆ.
ಎಂಎಲ್ಸಿ ವಿ.ಸೋಮಣ್ಣ ಹೆಸರು ಬಳಸಿ ಕೋಟ್ಯಂತರ ಹಣ ವಂಚನೆ
"ನನ್ನ ಹೆಸರು ಕಾಜಲ್ ಶರ್ಮ" ಎಂದು ಪರಿಚಯಿಸಿಕೊಂಡ ಆತ, ನಾನು ಎಸ್ ಬಿಐ ಅಧಿಕಾರಿಯಾಗಿದ್ದು, ನಿಮಗೆ ಆದಿತ್ಯ ಬಿರ್ಲಾ ಕಂಪನಿಯಿಂದ ಉಡುಗೊರೆಯ ವೋಚರ್ ಬಂದಿದೆ ಎಂದು ತಿಳಿಸಿದ್ದಾನೆ. ಆ ನಂತರ ಮಾತು ಮುಂದುವರಿಸಿದ ಆತ, ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿರುವ ವಿಳಾಸ ಪರಿಶೀಲಿಸಬೇಕಾಗಿದೆ. ಆದ್ದರಿಂದ ನಿಮ್ಮ ಕಾರ್ಡ್ ನಲ್ಲಿರುವ 16 ಸಂಖ್ಯೆಗಳಲ್ಲಿ ಕೊನೆಯ 8 ಸಂಖ್ಯೆಗಳನ್ನು ತಿಳಿಸಿ ಎಂದು ಕೇಳಿದ್ದಾನೆ.
ಆತ ಬ್ಯಾಂಕ್ ಅಧಿಕಾರಿಯೇ- ಅಲ್ಲವೇ ಎಂಬ ಗೊಂದಲಕ್ಕೆ ಬಿದ್ದ ಅಶ್ವಿನಿ, ಮೊದಲಿಗೆ ತಪ್ಪು ಸಂಖ್ಯೆಯನ್ನು ನೀಡಿ ಸುಮ್ಮನಾಗಿದ್ದಾರೆ. ಆ ನಂತರ ಆತ ಮತ್ತೆ ಕರೆ ಮಾಡಿ, ನೀವು ನೀಡಿರುವ ಸಂಖ್ಯೆ ಸರಿ ಹೊಂದುತ್ತಿಲ್ಲ. ಹೀಗಾಗಿ ಸರಿಯಾದ ಸಂಖ್ಯೆಯನ್ನು ನೀಡಿ ಎಂದು ಹೇಳಿದ್ದಾನೆ.
ಹೀಗಾಗಿ ಆತ ಬ್ಯಾಂಕ್ ಅಧಿಕಾರಿಯೇ ಇರಬಹುದು ಎಂದು ಭಾವಿಸಿದ ಅಶ್ವಿನಿ, ಕೊನೆಯ ಎಂಟು ಸಂಖ್ಯೆಗಳನ್ನು ನೀಡಿದ್ದಾರೆ.
ಇದಾದ ನಂತರ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆಯನ್ನೂ ಹೇಳಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಅಶ್ವಿನಿ ಅವರ ಖಾತೆಯಲ್ಲಿದ್ದ 13.500 ರುಪಾಯಿಗಳನ್ನು ವಂಚಕ ಡ್ರಾ ಮಾಡಿದ್ದಾನೆ. ಕೂಡಲೇ ಅವರು ತಮ್ಮ ಪತಿಯೊಡನೆ ಸರಸ್ವತಿಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.