ಜು.10ರಂದು ಮೈಸೂರಿನಲ್ಲಿ ಕೆ.ಎಸ್.ರಂಗಪ್ಪ ಜೆಡಿಎಸ್ ಗೆ
ಮೈಸೂರು, ಜುಲೈ 8 : ಈಗಾಗಲೇ ಹಲವು ಹಗರಣಗಳಲ್ಲಿ ಹೆಸರು ತಳಕು ಹಾಕಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು ಇದೇ ಜುಲೈ 10 ರ ಸೋಮವಾರದಂದು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ.
ನಗರದ ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಜುಲೈ 10ರಂದು ಸಂಜೆ 4ಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಪ್ರೊ.ಕೆ.ಎಎಸ್ ರಂಗಪ್ಪ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ.

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷದಿಂದ ನೆಲಸಿರುವ ಪ್ರೊ. ಕೆ.ಎಸ್ ರಂಗಪ್ಪ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ವೇಳೆ ಎರಡು ವಿಶ್ವವಿದ್ಯಾನಿಲಯಗಳಿಗೆ ಹೊಸ ರೂಪ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸದ್ಯ ವಿದೇಶದಲ್ಲಿರುವ ಪ್ರೊ.ಕೆ.ಎಸ್.ರಂಗಪ್ಪ ಜು.9 ರಂದು ಮೈಸೂರಿಗೆ ಹಿಂದಿರುಗುವರು. ಜೆಡಿಎಸ್ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರೊ.ರಂಗಪ್ಪ, ನನ್ನ ಗುರಿ ಚಾಮರಾಜ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ. ಜತೆಗೆ ಕ್ಷೇತ್ರದಲ್ಲಿ ಶಾಶ್ವತ ಯೋಜನೆ ಜಾರಿ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜೆಡಿಎಸ್ ಧುರೀಣರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಮತ್ತು ನಾಡು ಕಂಡ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕ್ಷೀರಕ್ರಾಂತಿ ಹರಿಕಾರ ಹೆಚ್ ಡಿ ರೇವಣ್ಣ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ರೈತಾಪಿ ವರ್ಗವು ಇಟ್ಟಿರುವ ಕನಸಿಗೆ ಕ್ಷಿಪ್ರವಾಗಿ ಸ್ಪಂದಿಸುವ ಪ್ರಾದೇಶಿಕವಾಗಿ, ದೀನದಲಿತರ ಉದ್ಧಾರಕ್ಕಾಗಿ ಇರುವ ಜಾತ್ಯತೀತ ಜನತಾದಳ ಪಕ್ಷಕ್ಕಾಗಿ ದುಡಿಯಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಒಟ್ಟಾರೆ ಮೈಸೂರಿನಲ್ಲಿ ಒಬ್ಬರ ಹಿಂದೆ ಮತ್ತೊಬ್ಬ ನಾಯಕರು ತೆನೆ ಹೊರುತ್ತಿದ್ದು ಸಿಎಂ ತವರು ಕ್ಷೇತ್ರದಲ್ಲೇ ಕೈಗೆ ಹಿನ್ನೆಡೆಯಾಗುವ ಲಕ್ಷಣಗಳು ಹೆಚ್ಚಾದಂತೆ ಕಂಡುಬರುತ್ತಿರುವುದಲ್ಲಿ ಸಂಶಯವಿಲ್ಲ.












Click it and Unblock the Notifications