ಮಾಜಿ VC ರಂಗಪ್ಪ ಶಾಸಕರಾದರೆ ದೇವರೇ ಗತಿ: ಮಧುಸೂದನ್
ಮೈಸೂರು , ಸೆಪ್ಟೆಂಬರ್ 14 : ರಾಜ್ಯ ಮುಕ್ತ ವಿವಿ ಹಗರಣದ ಎಲ್ಲಾ ಅವ್ಯವಹಾರಗಳಿಗೂ ವಿವಿ ವಿಶ್ರಾಂತ ಕುಲಪತಿ ರಂಗಪ್ಪನವರೇ ಕಾರಣ. ತಕ್ಷಣ ಸರ್ಕಾರ ವರ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಮೈಸೂರಿನವರೇ ಆಗಿದ್ದು ಸಣ್ಣಪುಟ್ಟ ಕಾಮಗಾರಿಗಳನ್ನು ಆಸಕ್ತಿಯಿಂದ ಪರಿಶೀಲಿಸುವರು. ಆದರೆ ಲಕ್ಷಾಂತರ ಕೋಟಿ ರೂಪಾಯಿ ಹಗರಣದ ಬಗ್ಗೆ ಇದುವರೆಗೂ ಮಾತನಾಡದೇ ಇರುವುದು ಖಂಡನೀಯವೆಂದರು.

ಯುಜಿಸಿ ನಿರ್ದೇಶಕ ವೇದ ಪ್ರಕಾಶ್ ಮೈಸೂರಿನಲ್ಲಿ ಕೆ.ಎಸ್.ರಂಗಪ್ಪನವರಿಂದ ಸನ್ಮಾನಿಸಿಕೊಂಡು ಹೋಗಿದ್ದು ಇದನ್ನು ಪರಿಗಣಿಸಿದರೆ ಅವರು ಸಹ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನೀಡಿರುವ ಸಾವಿರಾರು ದೂರುಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ, ಅಲ್ಲದೇ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಹಗರಣವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತದ ಸಂಗತಿಯಾಗಿದೆ. ಈ ವಿವಿಯಿಂದ ನೀಡಲ್ಪಡುವ ಗೌರವ ಡಾಕ್ಟರೇಟ್ ಪದವಿಗಳು ರದ್ದಿಗೆ ಸಮವೆಂದು ಟೀಕಿಸಿದರು.
ಕೆ.ಎಸ್.ಓ.ಯು ಉಪಕುಲಪತಿ ಪ್ರೊ.ಶಿವಲಿಂಗಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಾಜುಬಾಯಿ ರೂಢಬಾಯಿ ವಾಲ ಇವರುಗಳಿಗೆ ಪತ್ರ ಬರೆದು ಕ್ರಮವಹಿಸಲು ಮನವಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಅಧಿಕಾರಿಗಳನ್ನು ಬಂಧಿಸಿ ಪ್ರಮುಖ ರೂವಾರಿಯನ್ನು ಕೈಬಿಟ್ಟಿರುವುದು ಸರ್ಕಾರ ನಾಚಿಕೆಗೇಡಿನ ಕ್ರಮವಾಗಿದೆ. ಆದ್ದರಿಂದ ಈ ಕೂಡಲೇ ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸಿ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಇಲ್ಲವಾದರೇ ಕನಿಷ್ಠ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿಯಾದರು ದೂರು ದಾಖಲಿಸಿ ಎಂದು ಮಾರ್ಮಿಕವಾಗಿ ನುಡಿದರು.
ಪ್ರೊ.ಕೆ.ಎಸ್.ರಂಗಪ್ಪನವರಂತಹ ವಿದ್ಯಾದ್ರೋಹಿ, ವಿಶ್ವವಿದ್ಯಾನಿಲಯ ಕೊಲೆಗಾರ, ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಿದ್ದು ಇಂತಹ ಕ್ರಿಮಿನಲ್ ಅಪರಾಧಿಯನ್ನು ಶಾಸಕರನ್ನಾಗಿ ಮಾಡಬೇಕೆಂಬ ಹಠವನ್ನು ದಯಮಾಡಿ ಬಿಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ ತಿಳಿಸಿದರು.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಮುಖ ಆರೋಪಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಿ ಭವಿಷ್ಯಕ್ಕೆ ಟೋಪಿ ಹಾಕಿದ ಪ್ರೊ.ಕೆ.ಎಸ್.ರಂಗಪ್ಪ ನಿಮ್ಮ ಪಕ್ಷಕ್ಕೇ ಏಕೆ ಬೇಕೆಂದು, ಇತ್ತೀಚೆಗೆ ಪಕ್ಷಕ್ಕೆ ಬರಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಶಾಸಕ ಟಿಕೆಟ್ ನೀಡುತ್ತವೆಂದು ಘೋಷಿಸಿರುವ ನೀವು ಇಂತಹ ವ್ಯಕ್ತಿಗೆ ಶಾಸಕನ್ನಾಗಿಸಿ ಅವರ ವಿರುದ್ಧ ನಡೆಯುತ್ತಿರುವ ತನಿಖೆಯಿಂದ ಅವರನ್ನು ರಕ್ಷಿಸಲು ನಡೆಸಿರುವ ರಾಜಕೀಯ ಪಿತೂರಿಯೇ? ಅಥವಾ ಚುನಾವಣೆ ನಡೆಸಲು ತಮ್ಮ ಬಳಿ ಹಣವಿಲ್ಲವೇ, ಅವರ ಬಳಿ ಎಷ್ಟು ಹಣ ಪಡೆದುಕೊಂಡಿದ್ದೀರವೆಂದು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.
ಬಸರಾಜ ರಾಯರೆಡ್ಡಿಯಿಂದ ಹಫ್ತಾ ವಸೂಲಿ:
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಗರಣ ಮುಚ್ಚಿ ಹಾಕಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಫ್ತಾ ವಸೂಲಿ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಭ್ರಷ್ಟ ಎಂದು ವರ್ಷದ ಹಿಂದೆ ರಾಯರೆಡ್ಡಿ ಅವರು ಹೇಳಿಕೆ ನೀಡಿದ್ದರು. ಆದರೆ ಈಗ ಇದುವರೆಗೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಆರೋಪ ಮಾಡಿದ ನಂತರವೂ ಸಹ ಕ್ರಮ ಕೈಗೊಂಡಿಲ್ಲ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದ ಅವರು ನನಗೆ ರಾಯರೆಡ್ಡಿ ಅವರು ಹಣ ಪಡೆದು ತೆಪ್ಪಗಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು












Click it and Unblock the Notifications