ಉಪಚುನಾವಣೆ ಮುನ್ನವೇ ಜೆಡಿಎಸ್ ಸೋಲಿನ ಭವಿಷ್ಯ ನುಡಿದ ಜಿಟಿ ದೇವೇಗೌಡ
ಮೈಸೂರು, ಸೆಪ್ಟೆಂಬರ್ 5: "ಉಪಚುನಾವಣೆಯಲ್ಲಿ ಹುಣಸೂರಿನಿಂದ ಜೆಡಿಎಸ್ ಸ್ಪರ್ಧಿಸಿದರೆ ಸೋಲು ಖಚಿತ" ಎಂದು ಸ್ವಪಕ್ಷದ ಹುಳುಕನ್ನೇ ಜಿಟಿ ದೇವೇಗೌಡರು ಎತ್ತಿ ತೋರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹುಣಸೂರಿನ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಲಿದೆ. ಕಾಂಗ್ರೆಸ್ ಅಭ್ಯರ್ಥಿಗಳೇ ಅಲ್ಲಿ ಗೆಲ್ಲುತ್ತಾರೆ. ನನ್ನ ಮಗನನ್ನು ಅಲ್ಲಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಎಚ್ಡಿಕೆ ಕೇಳಿದ್ದರು. ನಾನು ಇಲ್ಲ ಎಂದಿದ್ದೇನೆ. ನನ್ನ ಮಗ ಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ. ಸದ್ಯಕ್ಕೆ ನಾನು ಯಾವ ಉಪಚುನಾವಣೆಯಲ್ಲೂ ಸ್ಪರ್ಧಿಸುತ್ತಿಲ್ಲ" ಎಂದು ಚುನಾವಣೆಗೂ ಮುನ್ನವೇ ಜೆಡಿಎಸ್ ಭವಿಷ್ಯ ನುಡಿದಿದ್ದಾರೆ ಜಿಟಿ ದೇವೇಗೌಡರು.

"ಎಚ್ಡಿಕೆ ಜೊತೆ ಆಕ್ಟಿಂಗ್ ಸಿಎಂ ಆಗಿದ್ದವರು ಸಾರಾ ಮಹೇಶ್. ಅವರೊಬ್ಬ ಸಂಘಟನಾ ಚತುರ. ನನಗಿಂತಲೂ ಸಂಘಟನಾ ಶಕ್ತಿ ತುಸು ಹೆಚ್ಚಾಗಿಯೇ ಇದೆ ಬಿಡಿ" ಎಂದು ಪರೋಕ್ಷವಾಗಿ ಸಾ.ರಾ.ಮಹೇಶ್ ಕಾಲೆಳೆದರು. "ಸಾರಾ ಮಹೇಶ್ ಇಷ್ಟು ದಿನ ರಾಜ್ಯದಲ್ಲಿ ಜೆಡಿಎಸ್ ಕಟ್ಟಿದರು. ಈಗ ದೇಶದಲ್ಲಿ ಪಕ್ಷ ಕಟ್ಟಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ" ಎಂದರು.

"ನಾನು ಸಚಿವನಾಗಿದ್ದಾಗ ಕ್ಷಣಕ್ಷಣಕ್ಕೂ ಅವಮಾನ ಮತ್ತು ನೋವು ಅನುಭವಿಸಿದ್ದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದವರು ರಾಜಕಾರಣಕ್ಕೆ ಬಂದು ನಮ್ಮಂತಹ ರಾಜಕಾರಣಿಗಳಿಗೆ ಮಾರಕವಾದರು. ಈಗ ಬಹಳ ಆರಾಮಾಗಿದ್ದೇನೆ. ಯಾವ ಅವಮಾನವೂ ಇಲ್ಲ, ನೋವು ಇಲ್ಲ. ಜತೆಗೆ ಈಗ ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ, ತಲೆಯ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ" ಎಂದರು.
"ಜಿಟಿ ದೇವೇಗೌಡ ನಮ್ಮಿಂದ ದೂರವಾಗಲಿ ಎಂದು ವರಿಷ್ಠರು ಕಾಯುತ್ತಿದ್ದರು. ಮಂತ್ರಿ ಸ್ಥಾನ ತೆಗೆದುಕೊಳ್ಳದೆ ವಾಪಸ್ಸು ಹೋಗಲಿ ಎಂಬುದು ಅವರ ಮನದ ಇಂಗಿತವಾಗಿತ್ತು. ಆದರೆ ನಾನು ಮಾತ್ರ ಮೈತ್ರಿ ಸರ್ಕಾರ ಉಳಿಸಲು ಕೊನೆ ಕ್ಷಣದವರೆಗೂ ಹೋರಾಡಿದೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು, ಮೈತ್ರಿ ಸರಕಾರ ಉಳಿಸಲು ನಾನು ಶತ ಪ್ರಯತ್ನ ಮಾಡಿದ್ದೇನೆ" ಎಂದರು.












Click it and Unblock the Notifications