ಕಾವೇರಿಗಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು-ಸ್ಪೀಕರ್ ಯು.ಟಿ ಖಾದರ್
ಮೈಸೂರು, ಸೆಪ್ಟೆಂಬರ್ 21: ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ನಮ್ಮ ನಡುವೆ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಂಡು ರಾಜ್ಯದ ಪರವಾಗಿ ಒಂದಾಗಿ ನಿಲ್ಲಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ರಾಜೀವ್ ನಗರದಲ್ಲಿರುವ ಮುಖಂಡ ಅಜೀಜ್ ಅಬ್ದುಲ್ಲಾ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನನಗೆ ಮೊದಲಿನಿಂದಲೂ ಅಚ್ಚುಮೆಚ್ಚು. ಬಿಷ್ ಅವರನ್ನು ನೋಡಿ ಸೌಹಾರ್ದತೆಯ ಭಾವನೆಯೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಪೇಜಾವರ ಶ್ರೀಗಳು ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಕಾರಣ ಭೇಟಿ ಮಾಡಿದ್ದೇನೆ ಎಂದರು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಾನೇನು ಮಾತನಾಡಲ್ಲ. ಮೈಸೂರು ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ವಿಚಾರವನ್ನು ಬದಿಗೊತ್ತಿ ಕಾನೂನಾತ್ಮಕ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಆಡಳಿತ ಮತ್ತು ಪ್ರತಿಪಕ್ಷಗಳು ರಾಜ್ಯದಹಿತಾಶಕ್ತಿ ಕಾಪಾಡಲು ಒಂದಾಗಬೇಕಿದೆ ಎಂದು ಹೇಳಿದರು.
ನಮ್ಮ ಜಲದ ವಿಚಾರದಲ್ಲಿ ನಮ್ಮದು ಸಾಂಘಿಕ ಹೋರಾಟ ನಡೆಯಬೇಕು. ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ನಮ್ಮ ನಡುವೆ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಂಡು ರಾಜ್ಯದ ಪರವಾಗಿ ಒಂದಾಗಿ ನಿಲ್ಲಬೇಕು. ಕಾವೇರಿ ನೀರಿನ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆಯುವ ಸಂದರ್ಭ ಒದಗಿ ಬಂದಿಲ್ಲ. ಕಾನೂನು ಹೋರಾಟದಲ್ಲಿ ಸರ್ಕಾರ ಮುಂದಾಗಿರುವುದರಿಂದ ನಾವೆಲ್ಲರೂ ಒಂದಾಗಿ ನಿಲ್ಲುವ ಕೆಲಸ ಮಾಡೋಣ ಎಂದು ಹೇಳಿದರು.
ಮಹಿಳೆಯರಿಗೆ ವಿಧಾನಸಭೆ, ಲೋಕಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರ ಸ್ವಾಗತಾರ್ಹ. ಹಲವಾರು ವರ್ಷಗಳಿಂದ ಮಹಿಳೆಯರಿಗೆ ಮೀಸಲಾತಿ ಕೊಡಬೇಕೆಂಬ ಕೂಗು ಇತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಇದ್ದರೂ ಶಾಸನಸಭೆಗಳಲ್ಲಿ ಇರಲಿಲ್ಲ. ಈಗ ಅವಕಾಶ ಸಿಗುವುದರಿಂದ ರಾಜಕೀಯ ಪ್ರಾತಿನಿಧ್ಯ ದೊರೆಯಲಿದೆ ಎಂದರು.
ಒಂದು ದೇಶ-ಒಂದು ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕರಡು ಪ್ರತಿ ಬರಬೇಕು. ಬಂದ ಮೇಲೆ ಗೊತ್ತಾಗಲಿದೆ. ದೇಶದ ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚರ್ಚೆಗಳು ನಡೆಯಬೇಕು ಎಂದು ಹೇಳಿದರು.












Click it and Unblock the Notifications