ಒಡೆಯರ್ ಮತ್ತು ವಿಶ್ವೇಶ್ವರಯ್ಯ ಅವರು ರಾಮ ಮತ್ತು ಹನುಮನಿದ್ದಂತೆ: ಜಿಟಿಡಿ ಬಣ್ಣನೆ
ಮೈಸೂರು, ಸೆಪ್ಟೆಂಬರ್ 15: ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಇವರಿಬ್ಬರೂ ರಾಮ ಮತ್ತು ಆಂಜನೇಯ ಇದ್ದಂತೆ ಎಂದು ಶಾಸಕ ಜಿ.ಟಿ ದೇವೇಗೌಡ ಅವರು ಹೇಳಿದರು.
ಸೆಪ್ಟೆಂಬರ್ 15 ರಂದು ಖ್ಯಾತ ಇಂಜಿನಿಯರ್, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ಹಿನ್ನೆಲೆಯ ಸರಳ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವರಿಬ್ಬರು ದೂರದೃಷ್ಟಿಯ ಫಲವಾಗಿಯೇ ಕೆಆರ್ ಎಸ್ ಆಣೆಕಟ್ಟೆ ನಿರ್ಮಾಣವಾಗಿ ಲಕ್ಷಾಂತರ ಜನ ರೈತರಿಗೆ ಮನೆ ಬೆಳಗುತ್ತಿದೆ ಎಂದರು.
ಕೆಆರ್ ಎಸ್ ನಲ್ಲಿ ಅವರಿಬ್ಬರ ಪ್ರತಿಮೆ ಸ್ಥಾಪಿಸುವುದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು. ರಾಮನ ಜೊತೆ ಆತನ ಭಂಟ ಹನುಮಂತ ಇರುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದರಿಂದ ಇಬ್ಬರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಸಲಹೆ ನೀಡಿದರು.

ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಆವರಣದಲ್ಲಿರುವ ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಇದೇ ವೇಳೆ ಹಿರಿಯ ಸಾಹಿತಿ ಹೊರೆಯಾಲ ದೊರೆಸ್ವಾಮಿ ರಚಿಸಿರುವ "ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಪ್ರತಿಮೆ ವಿವಾದ" ಎಂಬ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಮುಡಾ ಅಧ್ಯಕ್ಷ ಎಚ್.ವಿ ರಾಜೀವ್, ಡಿ.ಟಿ ಪ್ರಕಾಶ್, ಡಾ.ರಘುರಾಮ್ ವಾಜಪೇಯಿ, ವಿಕ್ರಂ ಅಯ್ಯಂಗಾರ್ ಹಾಜರಿದ್ದರು.












Click it and Unblock the Notifications