ಮೈಸೂರಿನಲ್ಲಿ ಪ್ರಚಾರಕ್ಕೆ ತೆರಳಿದ್ದ ವಿ ಸೋಮಣ್ಣಗೆ ಗ್ರಾಮಸ್ಥರ ತರಾಟೆ
ಮೈಸೂರು, ಏಪ್ರಿಲ್ 18: ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪ್ರಚಾರ ನಡೆಸುತ್ತಿರುವ ವಿ ಸೋಮಣ್ಣಗೆ ಮೈಸೂರು ಬಳಿಯ ಲಲಿತಾದ್ರಿಪುರ ಗ್ರಾಮದಲ್ಲಿ ಗ್ರಾಮಸ್ಥರಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದಲ್ಲಿ ಮಂಗಳವಾರ ವಿ ಸೋಮಣ್ಣ ಅವರು ಮತಯಾಚನೆಗೆ ತೆರಳಿದ್ದರು. ಆಗ ಗ್ರಾಮಸ್ಥರು ಅವರನ್ನು ಸುತ್ತುವರಿದು ಕ್ಷೇತ್ರದ ಅಭಿವೃದ್ಧಿಯ ಕೊರತೆಯ ಬಗ್ಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರು ವಿ ಸೋಮಣ್ಣ ಅವರನ್ನು ಸುತ್ತುವರಿದು ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಮಧ್ಯಪ್ರವೇಶಿಸಲು ಯತ್ನಿಸಿದರು ಆದರೂ ಗ್ರಾಮಸ್ಥರು ತಮ್ಮ ಮಾತುಗಳನ್ನು ಮುಂದುವರೆಸಿದರು. ಆಗ ಸೋಮಣ್ಣ ಮತ್ತು ಗ್ರಾಮಸ್ಥರ ನಡುವಿನ ವಾಗ್ವಾದವನ್ನು ರೆಕಾರ್ಡ್ ಮಾಡಬೇಡಿ ಎಂದು ಪ್ರತಾಪ್ ಸಿಂಹ ಅವರು ಜನರಿಗೆ ಮನವಿ ಮಾಡಿದರು.
ಮತಯಾಚನೆ ವೇಳೆ ಗ್ರಾಮಸ್ಥರು ವಿ ಸೋಮಣ್ಣ ಅವರಿಗೆ ನೀವು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನೀವು ಏನು ಅಭಿವೃದ್ಧಿ ಮಾಡಿದ್ದೀರಿ. ಆವಾಗ ಏನು ಕೊಡುಗೆ ನೀಡಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ ಎಂದು ಗ್ರಾಮಸ್ಥರು ಸೋಮಣ್ಣ ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದರು. ಗ್ರಾಮಸ್ಥರು ಬಹಿರಂಗ ಪ್ರಶ್ನೆಗೆ ಉತ್ತರಿಸುವಾಗ ವಿ.ಸೋಮಣ್ಣ ಹಾಗೂ ಪ್ರತಾಪ್ ಸಿಂಹ ತಬ್ಬಿಬ್ಬಾದ ಘಟನೆ ನಡೆಯಿತು.

ಪ್ರಚಾರದ ವೇಳೆ ಮತದಾರರು ಸೋಮಣ್ಣ ಅವರಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತಡೆದಿದ್ದು, ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications