ಅರಣ್ಯ ಸಿಬ್ಬಂದಿಯೊಂದಿಗೆ ಮೈಸೂರು ಆನೆ ಕಣ್ಣಾಮುಚ್ಚಾಲೆ
ಮೈಸೂರು, ಡಿ. 3 : ಮೈಸೂರು ಹೊರವಲಯದಲ್ಲಿ ಕಾಣಿಸಿಕೊಂಡಿದ್ದ ಎಂಟು ಕಾಡಾನೆಗಳ ತಂಡವನ್ನು ಕಾಡಿಗಟ್ಟಲು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ವಿಫಲವಾಗಿದೆ. ಮಂಗಳವಾರ ಮುಂಜಾನೆ ಆನೆಗಳ ತಂಡ ನಂಜನಗೂಡು ರಸ್ತೆ ಮತ್ತು ಹೊರವರ್ತುಲ ರಸ್ತೆ ಕೂಡುವ ಬಂಡಿಪಾಳ್ಯದ ಕಾವೇರಿತೋಟದಲ್ಲಿ ಕಾಣಿಸಿಕೊಂಡಿವೆ. ಸಾಕು ಆನೆಗಳನ್ನು ಕರೆಸಲಾಗಿದ್ದು, ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮುಂದುವರೆದಿದೆ.
ಸೋಮವಾರ ಮುಂಜಾನೆ ಎರಡು ಮರಿ ಆನೆಗಳು ಸೇರಿದಂತೆ ಆರು ಆನೆಗಳ ತಂಡ ಮೈಸೂರು ನಗರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಚಿತ್ರವನ ಫಾರಂ ಬಳಿ ಕಾಣಿಸಿಕೊಂಡಿದ್ದವು. ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಕಾಡಿನತ್ತ ಮುಖ ಮಾಡದ ಆನೆಗಳು ಮಂಗಳವಾರ ನಗರಕ್ಕೆ ಮತ್ತಷ್ಟು ಹತ್ತಿರವಾಗಿವೆ. (ಮೈಸೂರು ಹೊರವಲಯದಲ್ಲಿ ಕಾಡಾನೆಗಳು ಪ್ರತ್ಯಕ್ಷ)

ಎಚ್ಡಿ ಕೋಟೆ ಕಾಡಿನಿಂದ ಮೈಸೂರು ನಗರದತ್ತ ಬರುತ್ತಿದ್ದ ಆನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಜನವಸತಿ ಪ್ರದೇಶಗಳತ್ತ ಆಗಮಿಸದಂತೆ ಡಿಎಫ್ಓ ಡಿ.ಎಸ್.ಗಾಂವ್ಕರ್ ನೇತೃತ್ವದಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿ ವೇಳೆಗೆ ಮೂರು ಗುಂಪುಗಳಾಗಿ ಚದುರಿದ್ದ ಆನೆಗಳು ಮಂಗಳವಾರ ಮುಂಜಾನೆ ನಂಜನಗೂಡು ರಸ್ತೆ ಮತ್ತು ಹೊರವರ್ತುಲ ರಸ್ತೆ ಕೂಡುವ ಬಂಡಿಪಾಳ್ಯದ ಕಾವೇರಿ ತೋಟದಲ್ಲಿ ಕಾಣಿಸಿಕೊಂಡಿವೆ. (ಮೈಸೂರು ರೌಡಿ ಆನೆಗಳ ಪುಂಡಾಟಿಕೆ)
ಕಾವೇರಿ ತೋಟದಿಂದ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿದ್ದರಿಂದ ಎರಡು ಮರಿಯಾನೆಗಳನ್ನೊಳಗೊಂಡ ಐದು ಆನೆಗಳ ತಂಡ ಮತ್ತೊಂದು ಗುಂಪಾಗಿ ಪೊದೆಯಲ್ಲಿ ಅಡಗಿಕೊಂಡಿವೆ. ಆದ್ದರಿಂದ ಕಾರ್ಯಾಚರಣೆಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಸದ್ಯ ದಸರಾ ಆನೆಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಇವುಗಳ ಮೂಲಕ ಕಾಡಾನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸಲಾಗುತ್ತದೆ.
ದಸರಾ ಗಜಪಡೆ ಆಗಮನ : ಮೈಸೂರು ಹೊರವಲಯದಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗಟ್ಟಲು ದಸರಾ ಗಜಪಡೆಗಳು ಆಗಮಿಸಿವೆ. ಆನೆಗಳಾದ ವಿಕ್ರಮ, ಗಜೇಂದ್ರ, ಶ್ರೀರಾಮ ಮತ್ತು ಪ್ರಶಾಂತ್ ಮೈಸೂರಿಗೆ ಆಗಮಿಸಿದ್ದು, ಇವುಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.












Click it and Unblock the Notifications