ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುರಿತು ಡಿ.ವಿ. ಸದಾನಂದಗೌಡ ಪ್ರತಿಕ್ರಿಯೆ
ಮೈಸೂರು, ಜುಲೈ 13: "ಅಧಿಕಾರ ಕೊಟ್ಟಾಗ ಎತ್ತರಕ್ಕೆ ಏರುವುದು, ಅಧಿಕಾರ ಕೊಡದಿದ್ದಾಗ ಕೆಳಕ್ಕೆ ಇಳಿಯಬಾರದು. ಎಲ್ಲವನ್ನೂ ಸಮಾನ ಮನಸ್ಸಿನಲ್ಲಿ ಸ್ವೀಕರಿಸಿ ಮುಂದೆ ನಡೆಯಬೇಕು,'' ಎನ್ನುವ ಮೂಲಕ ಅಧಿಕಾರದಾಸೆಗೆ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಜನಪ್ರತಿನಿಧಿಗಳಿಗೆ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು, "ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಪಕ್ಷ ಕೊಟ್ಟಂತಹ ಅವಕಾಶಗಳು ಬಹುಶಃ ರಾಜ್ಯದಲ್ಲಿ ಯಾರಿಗೂ ಸಿಕ್ಕಿಲ್ಲ. ನಾನೊಬ್ಬ ಸುಸಂಸ್ಕೃತ ರಾಜಕಾರಣಿ. ಎಲ್ಲವನ್ನೂ ಸಮಾನ ಮನಸ್ಸಿನಲ್ಲಿ ಸ್ವೀಕರಿಸಿ ಮುಂದೆ ನಡೆಯುತ್ತೇನೆ,'' ಎಂದರು.
ಇದೇ ವೇಳೆ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುರಿತು ಮಾತನಾಡಿದ ಡಿ.ವಿ. ಸದಾನಂದಗೌಡ, "ರಾಜೀನಾಮೆ ವಿಚಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ. ಕೆಲ ರಾಜ್ಯಗಳ ಮುಂದಿನ ಚುನಾವಣೆಯ ಸಂಘಟನಾ ದೃಷ್ಟಿಯಿಂದ ರಾಜಿನಾಮೆ ಕೇಳಿದರು. ತಕ್ಷಣ ರಾಜೀನಾಮೆ ನೀಡಿದ್ದೇವೆ. ಅಲ್ಲದೇ ತಾವು ರಾಜೀನಾಮೆ ನೀಡಿರುವುದು ಸಂಘಟನೆಗೆ ಸಂಬಂಧಪಟ್ಟ ವಿಚಾರವಾಗಿದೆ. ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೆದಿದೆ. ಮೂರ್ನಾಲ್ಕು ರಾಜ್ಯದಲ್ಲಿದ್ದ ಬಿಜೆಪಿ ಈಗ ಹದಿಮೂರು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಮೋದಿ ಜಾಗತಿಕವಾಗಿ ಬೆಳೆದಿದ್ದಾರೆ,'' ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಸಂಪುಟ ವಿಸ್ತರಣೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದು ಪಕ್ಷದ ಸಂಘಟನೆ ವಿಚಾರ. ಪಕ್ಷ ಬೆಳೆಯಬೇಕು ಅಂದರೆ ಇತರ ಪಕ್ಷದಿಂದ ಬಂದವರೂ ಸಿದ್ದಾಂತ ಒಪ್ಪಿಕೊಳ್ಳಬೇಕು. ಹೊರಗಿನಿಂದ ಬಂದವರನ್ನು ಸ್ಟ್ರೀಮ್ಲೈನ್ ಮಾಡುವ ಅವಶ್ಯಕತೆ ಇದೆ. ಪಕ್ಷ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.''

"ರಾಜಕೀಯ ಅಂದರೆ ದೊಡ್ಡ ಸಮುದ್ರ ಇದ್ದಂತೆ, ಸಮುದ್ರ ಸ್ನಾನಕ್ಕೆ ಇಳಿದರೆ ಅಲೆಗಳಿಗೆ ಕಾಯಬಾರದು. ಅದೇ ರೀತಿ ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ನಮ್ಮ ಕೆಲಸ, ಕಮೀಟ್ಮೆಂಟ್ ಮೂಲಕ ಉತ್ತರ ಕೊಡಬೇಕು. ನಾನು ಏರ್ಪೋರ್ಟ್ಗೆ ಬಂದಾಗ ಸ್ವಾಗತ ಮಾಡುವುದಕ್ಕೆ ನಾಲ್ಕು ಸಾವಿರ ಜನ ಬಂದಿದ್ದರು. ಇದಕ್ಕಿಂತ ದೊಡ್ಡ ಸಂಪಾದನೆ ಏನಿದೆ. ಎಲ್ಲಾ ಟೀಕೆಗೆಗೂ ಇದೇ ಉತ್ತರ,'' ಎಂದು ರಾಜೀನಾಮೆ ವಿಚಾರವಾಗಿ ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.












Click it and Unblock the Notifications