ಮೈಸೂರು ದಸರಾ ಆಹಾರ ಮೇಳಕ್ಕೆ ಮಳೆರಾಯನ ಮುನಿಸು
ಮೈಸೂರು, ಸೆಪ್ಟೆಂಬರ್ 26: ಭಾನುವಾರ ಹಾಗೂ ಸೋಮವಾರ ಸುರಿದ ಭಾರೀ ಮಳೆಗೆ ದಸರಾ ಆಹಾರ ಮೇಳದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದಾಗಿ ವ್ಯಾಪಾರದಲ್ಲಿ ತೀವ್ರ ನಷ್ಟವಾಗಿದೆ. "ನಮಗೆ ಶೆಡ್ ನಲ್ಲಿ ಮಲಗಲೂ ಸೂಕ್ತ ವ್ಯವಸ್ಥೆಯಿಲ್ಲದೆ ಒದ್ದೆ ನೆಲದಲ್ಲಿಯೇ ರಾತ್ರಿ ಕಳೆದಿದ್ದಾಯ್ತು" ಎಂದು ಬೇಸರದಿಂದಲೇ ಮಾತನಾಡಿದರು ಅಂಗಡಿ ಮಾಲೀಕರು.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಮೊದಲೆರಡು ದಿನ ಉತ್ತಮ ವ್ಯಾಪಾರ ನಡೆಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ ಮಳೆಯಿಂದಾಗಿ ಗ್ರಾಹಕರ ಕೊರತೆಯಾಗಿ ಮಾಡಿದ ಅಡುಗೆಯೇ ವ್ಯರ್ಥವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮಗೂ ವೇದಿಕೆ ವ್ಯವಸ್ಥೆ ಮಾಡಿದ್ದರೆ ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದೆವು ಎನ್ನುವ ಅಳಲು ವ್ಯಕ್ತಪಡಿಸಿದರು.
ಇನ್ನು ಆಹಾರ ಮೇಳದಲ್ಲಿ ದಾವಣಗೆರೆ ಬೆಣ್ಣೆ ದೋಸೆ, ಜೋಳದ ರೊಟ್ಟಿ, ಗಿರ್ಮಿಟ್, ಮಿರ್ಚಿ, ಬಂಗಾರ ಪೇಟೆ ಚಾಟ್ಸ್, ಮೇಲುಕೋಟೆ ಪುಳಿಯೋಗರೆ, ದೊನ್ನೆ ಬಿರಿಯಾರಿ, ಚಿಕನ್ ಕಬಾಬ್, ಮಟನ್ ಪಲಾವ್, ಅಕ್ಕಿ ಕಡುಬಿಗೆ ಹೆಚ್ಚಿನ ಬೇಡಿಕೆಯಿದೆ.
ಕ್ಷಣಾರ್ಧದಲ್ಲಿ ಮೈಸೂರು ಪಾಕ್ ಗಬಗಬನೆ ತಿಂದ ಭೂಪ
ಮೊದಲೆರಡು ದಿನದ ವ್ಯಾಪಾರದಿಂದ ಮೊಗದಲ್ಲಿ ಮೂಡಿದ ನಗುವು, ಭಾನುವಾರ ಸೋಮವಾರದ ಎರಡು ದಿನಗಳ ಮಳೆ ನುಂಗಿ ಹಾಕಿದೆ ಎನ್ನುವುದು ಬಹುತೇಕ ವ್ಯಾಪಾರಿಗಳ ಅಳಲಾಗಿತ್ತು.
ಸಂಜೆ ಮೇಲೆ ಗಿರ್ಮಿಟ್- ಮಿರ್ಚಿ ಬಜ್ಜಿಗೆ ಬೇಡಿಕೆ
ಉತ್ತರ ಕರ್ನಾಟಕದ ಜನಪ್ರಿಯ ಖಾಧ್ಯ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಹಾಗೂ ಟೊಮೆಟೋ ಚಟ್ನಿಗೆ ಮೈಸೂರಿಗರು ಮನಸೋತಿದ್ದಾರೆ. ನಿತ್ಯ ಸಾವಿರಕ್ಕೂ ಅಧಿಕ ರೊಟ್ಟಿಗಳು ಖರ್ಚಾಗುತ್ತಿವೆ ಎಂದು ಹುಬ್ಬಳ್ಳಿ ಮೂಲದ ಶಿವಯೋಗಿ ಚಿಕ್ಕಮಠ್ ಅವರು ತಿಳಿಸಿದರು.
ಸಂಜೆ ನಂತರ ಗಿರ್ಮಿಟ್ ಮತ್ತು ಮಿರ್ಚಿಗೆ ಹೆಚ್ಚಿನ ಬೇಡಿಕೆ ಇದೆ. ಮೈಸೂರಿಗರು ಮೊದಲು ಗಿರ್ಮಿಟ್ ಅಂದರೇನು ಎಂದು ಪ್ರಶ್ನಿಸಿ, ರುಚಿ ಸವಿದ ಮೇಲೆ ಮತ್ತೆರಡು ಆರ್ಡರ್ ನೀಡುವರು ಎಂದು ತಿಳಿಸಿದರು.
ಅಸಮರ್ಪಕ ನೀರಿನ ವ್ಯವಸ್ಥೆ
ಮಹಿಳೆಯರಿಗೆ ಶೌಚಾಲಯದ ಕೊರತೆಯಿದೆ. ನೀರಿನ ವ್ಯವಸ್ಥೆಯಿದೆಯಾದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎನ್ನುವುದು ಕೆಲವು ವ್ಯಾಪಾರಿಗಳ ದೂರು. ಇನ್ನು ಲಲಿತ ಮಹಲ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಆಹಾರ ಮೇಳವೂ ನಿರೀಕ್ಷೆಗೂ ಮೀರಿ ಜನಪ್ರಿಯತೆ ಗಳಿಸಿದೆ ಎನ್ನುತ್ತಾರೆ ದಸರಾ ಉಪಸಮಿತಿಯ ಕೆ.ಎಂ.ಮಹದೇವಸ್ವಾಮಿ ಹಾಗೂ ಆಹಾರ ಇಲಾಖೆಯ ಜಯಮ್ಮ.
ಆಹಾರ ಮೇಳದ ಯಶಸ್ಸಿಗಾಗಿ ಶ್ರಮ
ಆಹಾರ ಮೇಳದ ಯಶಸ್ಸಿಗೆ ಹದಿನೈದು ದಿನಗಳಿಂದ ಹಗಲಿರುಳೆನ್ನದೆ ಶ್ರಮಿಸಿದ್ದೇವೆ. ಇದೇ ಮೊದಲ ಬಾರಿಗೆ ಈ ಸ್ಥಳದಲ್ಲಿ ಆಯೋಜಿಸಿರುವ ಆಹಾರ ಅಲ್ಪಸ್ವಲ್ಪ ಕೊರತೆ ಆಗಿದ್ದು ಅದು ನಗಣ್ಯ. ಎಲ್ಲ ಆಹಾರ ಅಂಗಡಿಗಳ ಮುಂದೆ ಎರಡೆರಡು ಕಸದ ಬುಟ್ಟಿ, ಕುಡಿಯಲು ಮತ್ತು ಕೈ ತೊಳೆಯಲು ಪ್ರತ್ಯೇಕ ನೀರಿನ ವ್ಯವಸ್ಥೆ ಸೇರಿದಂತೆ ಸೂಕ್ತ ರೀತಿಯಲ್ಲಿ ವ್ಯಾಪಾರಿಗಳ ಬೇಡಿಕೆಗಳನ್ನು ಪೂರೈಸಲಾಗಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.
ನಷ್ಟ ಸರಿದೂಗಿಸಲು ಗಡುವು ವಿಸ್ತರಿಸಲಿ
ಭಾನುವಾರ ಹಾಗೂ ಸೋಮವಾರ ಬಿದ್ದ ಮಳೆಯಿಂದಾಗಿ ವ್ಯಾಪಾರ ನಷ್ಟವಾಗಿದ್ದು, ವ್ಯಾಪಾರಕ್ಕೆ ಎರಡು ದಿನಗಳ ಹೆಚ್ಚಿನ ಗಡುವು ನೀಡಿದರೆ ನಷ್ಟ ಸರಿದೂಗಿಸಲು ಸಾಧ್ಯ ಎನ್ನುವುದು ವ್ಯಾಪಾರಿಗಳ ಇಂಗಿತ. ಇದೇ ಮೊದಲ ಬಾರಿಗೆ ಲಲಿತ ಮಹಲ್ ಪ್ಯಾಲೇಸ್ ಮೈದಾನದಲ್ಲಿ ಹಮ್ಮಿಕೊಂಡಿರುವ ಆಹಾರ ಮೇಳದಲ್ಲಿ 74 ಮಳಿಗೆಗಳಲ್ಲಿ 14 ಜಿಲ್ಲೆಗಳ ವಿವಿಧ ಬಗೆಯ ಆಹಾರಗಳ ಮಾರಾಟವಿದೆ. ಉತ್ತರ ಕರ್ನಾಟಕ ಶೈಲಿಯೂ ಸೇರಿದಂತೆ ಉತ್ತರ ಭಾರತ ಆಹಾರ, ಸಿರಿಧಾನ್ಯವನ್ನು ಪರಿಚಯಿಸಲಾಗಿದೆ.
ಗ್ರಾಹಕರಿಗೆ ಮಳೆಯಿಂದ ರಕ್ಷಣೆ
ಮಳೆಯಿಂದ ಗ್ರಾಹಕರಿಗೆ ಸೂಕ್ತ ರಕ್ಷಣೆ ನೀಡಲು ಹಲವು ಅಂಗಡಿಗಳ ಮಾಲೀಕರು ಮುಂದಾಗಿದ್ದು ಕಂಡು ಬಂತು. ಮುಂದಿನ ದಿನಗಳಲ್ಲಿಯಾದರೂ ಉತ್ತಮ ವ್ಯಾಪಾರ ನಡೆದು, ಲಾಭ ತರಲಿ ಎನ್ನುವುದು ಹೆಚ್ಚಿನ ವ್ಯಾಪಾರಿಗಳ ನಿರೀಕ್ಷೆಯಾಗಿತ್ತು.