ಸೈಯದ್ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ; ಕಾರಣ ಬಹಿರಂಗ
ಮೈಸೂರು, ಏಪ್ರಿಲ್ 17; ಪುಸ್ತಕ ಪ್ರೇಮಿಗಳು ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಸೈಯದ್ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಸತ್ಯಾಂಶ ಕಡೆಗೂ ಬದಲಾಗಿದೆ. ಕುಡುಕನೊಬ್ಬ ಮಾಡಿದ ಅವಾಂತರಕ್ಕೆ ಸಾವಿರಾರು ಪುಸ್ತಕಗಳು ಬೆಂಕಿಗಾಹುತಿಯಾಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಶನಿವಾರ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ತನಿಖೆ ಬಗ್ಗೆ ಮಾಹಿತಿ ನೀಡಿದರು. ಆರೋಪಿ ಸೈಯದ್ ನಾಸಿರ್ ಎಂಬಾತ ಕುಡಿದ ಮತ್ತಿನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಸಾವಿರಾರು ಪುಸ್ತಕಗಳು ಸುಟ್ಟು ಹೋಗಿವೆ ಎಂದರು.
ಕಲೀಮುಲ್ಲ ಖಾನ್ ಕುಷನ್ ರಿಪೇರಿ ಮಾಡುವ ಸ್ಥಳದಲ್ಲಿ ನಿಂತು ಬೀಡಿ ಸೇದಿದ್ದ ಸೈಯದ್ ನಾಸಿರ್, ಕುಡಿದ ಮತ್ತಿನಲ್ಲಿ ಬೀಡಿ ಸೇದಿ ಬೆಂಕಿ ಕಡ್ಡಿಯನ್ನು ಕುಷನ್ ಮೇಲೆ ಎಸೆದಿದ್ದ. ಇದರ ಪರಿಣಾಮ ಸೋಫಾ ರಿಪೇರಿ ಅಂಗಡಿಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮರಳಿನ ಸಹಾಯದಿಂದ ಬೆಂಕಿ ಅರಿಸಿದ್ದರು.

ಮಧ್ಯರಾತ್ರಿ ಸುಮಾರು 2 ಗಂಟೆಗೆ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಸೋಫಾ ರಿಪೇರಿ ಅಂಗಡಿಗೆ ಹೊಂದಿಕೊಂಡಂತಿದ್ದ ಸಯ್ಯದ್ ಇಸಾಕ್ ಅವರ ಗ್ರಂಥಾಲಯ ಕೂಡ ಬೆಂಕಿಗೆ ಅಹುತಿಯಾಗಿದೆ. ಸೈಯದ್ ನಾಸಿರ್ ನಡೆಸಿದ ಎಡವಟ್ಟಿನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಸೈಯದ್ ನಾಸಿರ್ ಈ ಕೃತ್ಯವನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾನಾ? ಅಥವಾ ಆಕಸ್ಮಿಕವಾಗಿ ಬೆಂಕಿ ಕಡ್ಡಿಯನ್ನು ಎಸೆದಿದ್ದಾನೇಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.












Click it and Unblock the Notifications