ಅಣ್ಣನ ವಿರುದ್ಧ ವರದಕ್ಷಿಣೆ ಕೇಸ್ : ಅತ್ತಿಗೆಗೆ ಮಟನ್ ಮಚ್ಚಿನೇಟು
ಮೈಸೂರು, ಜುಲೈ 21 : ಅಣ್ಣನ ವಿರುದ್ಧ ಅತ್ತಿಗೆ ವರದಕ್ಷಿಣೆ ದೂರು ನೀಡಿ ಜೈಲು ಪಾಲಾಗುವಂತೆ ಮಾಡಿದ್ದರಿಂದ ಆಕ್ರೋಶಗೊಂಡ ಸಹೋದರ, ಅತ್ತಿಗೆ ಹಾಗೂ ಆಕೆಯ ಕುಟುಂಬ ಸದಸ್ಯರ ಮೇಲೆ ಮಟನ್ ಕತ್ತರಿಸುವ ಮಚ್ಚಿನಲ್ಲೇ ಮಾರಣಾಂತಿಕ ಹಲ್ಲೆ ನಡೆಸಿ, ಓರ್ವನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೈಸೂರಿನ ಶಾಂತಿನಗರದಲ್ಲಿ ಘಟನೆ ನಡೆದಿದ್ದು, ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ಘಟನೆ ವಿವರ : ಅಣ್ಣನ ಮೇಲೆ ಅತ್ತಿಗೆ ವರದಕ್ಷಿಣೆ ಕೇಸ್ ದಾಖಲಿಸಿದ್ದರು. ಅಣ್ಣ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ. ಇದರಿಂದ ಕೆಂಡಾಮಂಡಲವಾದ ಸಹೋದರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಅತ್ತಿಗೆ ಮತ್ತು ಅವರ ತಾಯಿ, ತಂದೆ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ತೀವ್ರ ಅಸ್ವಸ್ಥರಾದ ಅತ್ತಿಗೆಯ ತಂದೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವಿಗೀಡಾಗಿದರು. ಗಂಭೀರವಾಗಿ ಗಾಯಗೊಂಡಿರುವ ಅತ್ತಿಗೆ ಹಾಗೂ ಅವರ ತಾಯಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಕ್ಷಿಣೆ ಕಿರುಕುಳದ ಆರೋಪ ಹೊತ್ತಿರುವ ಸೈಯದ್ ಸುಹೇಲ್ ಹಾಗೂ ನಫೀಜಾ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಸಂಸಾರದಲ್ಲಿ ವೈಮನಸ್ಯ ಮೂಡಿದ್ದರಿಂದ 3 ವರ್ಷಗಳ ಹಿಂದೆ ಈ ದಂಪತಿ ಬೇರ್ಪಟ್ಟಿದ್ದರು. ಪರಿಹಾರಕ್ಕಾಗಿ ಪತ್ನಿ ನಫೀಜಾ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡಿಸಿದ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ಆರೋಪಿ ಸೈಯದ್ ಸುಹೇಲ್ ಪರಿಹಾರ ನೀಡದೆ 80 ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದ. ಇದನ್ನು ಪ್ರಶ್ನಿಸಿ ಮತ್ತೆ ನಫೀಜಾ ನ್ಯಾಯಾಲಯದ ಮೊರೆ ಹೋಗಿದ್ದರು. ಶುಕ್ರವಾರ ನ್ಯಾಯಾಲಯದಲ್ಲಿ ಸೈಯದ್ ಸುಹೇಲ್ ಗೆ ನ್ಯಾಯಾಂಗ ಬಂಧನ ಶಿಕ್ಷೆ ನೀಡಲಾಗಿತ್ತು.
ಇದರಿಂದ ಬೇಸತ್ತ ಸೈಯದ್ ಸುಹೇಲ್ ಸಹೋದರ ಸೈಯದ್ ಇರ್ಫಾನ್, ಅತ್ತಿಗೆ ಮನೆಗೆ ಬಂದು ಮಚ್ಚಿನಲ್ಲಿ ಹಲ್ಲೆ ನಡೆಸಿದ್ದಾನೆ. ಮಾವ ಅಸ್ಲಂ ಪಾಷಾ ಸಾವನ್ನಪ್ಪಿದರೆ, ಅತ್ತೆ ದಿಲ್ಶಾನ್ ಬಾನು, ಅತ್ತಿಗೆ ನಫೀಜಾ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ನಡೆಸಿದ ಸೈಯದ್ ಸುಹೇಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಟನ್ ಅಂಗಡಿಯಲ್ಲಿ ಕೆಲಸ ಮಾಡುವ ಸೈಯದ್ ಸುಹೇಲ್ ಮಾಂಸ ಕತ್ತರಿಸುವ ಮಚ್ಚಿನಲ್ಲಿ ಹಲ್ಲೆ ಮಾಡಿದ್ದಾನೆ. ಸದ್ಯ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications