ಗ್ರಾ.ಪಂ ಅಧ್ಯಕ್ಷರ ಮಗಳ ಮೇಲೆ ಬೀದಿನಾಯಿಗಳ ದಾಳಿ
ಮೈಸೂರು, ಆಗಸ್ಟ್ 12: ಕೇವಲ ನಗರಗಳಲ್ಲಿ ಕಂಡು ಬರುತ್ತಿದ್ದ ನಾಯಿಗಳ ಹಾವಳಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು, ಶಾಲಾ ಬಾಲಕಿಯೊಬ್ಬಳು ಮನೆ ಮುಂದೆ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿ, ಕಡಿದು ಗಾಯಗೊಳಿಸಿದ ಘಟನೆ ಹುಣಸೂರು ತಾಲೂಕು ಗಾವಡಗೆರೆ ಹೋಬಳಿಯ ಹರವೆ ಗ್ರಾಮದಲ್ಲಿ ನಡೆದಿದೆ.
ಹರವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿಯಪ್ಪ ಎಂಬುವರ ಪುತ್ರಿ 2ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಲಕ್ಷ್ಮಿ ಬೀದಿನಾಯಿಗಳ ದಾಳಿಗೊಳಗಾದ ಬಾಲಕಿ.

ಎಂದಿನಂತೆ ಶಾಲೆಗೆ ತೆರಳಿ, ವಾಪಸ್ ಬಂದ ನಂತರ ತನ್ನ ಮನೆ ಮುಂದೆಯೇ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬೀದಿನಾಯಿಗಳು ಬಾಲಕಿ ಮೇಲೆ ದಿಢೀರ್ ದಾಳಿ ನಡೆಸಿ, ಕಡಿದಿವೆ.
ಬಾಲಕಿ ಹೆದರಿ ಕಿರುಚಿಕೊಂಡಿದ್ದು, ಈ ಶಬ್ದ ಕೇಳಿ ಮನೆಯವರು ಬಂದು ನಾಯಿಗಳನ್ನು ಓಡಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಯಿತು.

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇವುಗಳು ಆಗಾಗ ಸಾಕು ಪ್ರಾಣಿಗಳ ಮೇಲೆಯೂ ದಾಳಿ ಮಾಡುತ್ತಿದ್ದು, ಇವುಗಳ ನಿಯಂತ್ರಿಸಲು ಗ್ರಾಮ ಪಂಚಾಯಿತಿ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದವರು ಇನ್ನಾದರೂ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications