ಮೈಸೂರು – ಕೊಡಗು ಕ್ಷೇತ್ರದಲ್ಲಿ ಒಬ್ಬಬ್ಬ ಅಭ್ಯರ್ಥಿಗಳದ್ದು ತರಹೇವಾರಿ ಚುನಾವಣಾ ಚಿಹ್ನೆ !
ಮೈಸೂರು, ಏಪ್ರಿಲ್ 13 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ದಿನಕ್ಕೊಂದು ಕಡೆ ಬಹಳ ವೇಗವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಈ ಬಾರಿ 15 ಮಂದಿ ಕಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ನೇರ ಹಣಾಹಣಿ ಮಧ್ಯೆ ಇವರ ಪಾತ್ರ ಏನಿರಬಹುದು, ಯಾವ ರೀತಿ ತಮ್ಮ ಹೆಜ್ಜೆ ಗುರುತು ಮೂಡಿಸಲಿದ್ದಾರೆ ಎಂಬುದು ಕ್ಷೇತ್ರದ ಮತದಾರರಲ್ಲಿ ಕುತೂಹಲ ಮೂಡಿದೆ.
ಕಳೆದ ಲೋಕಸಭಾ ಚುನಾವಣೆ ಅಂದರೆ 2014ರ ಚುನಾವಣೆಯಲ್ಲಿ ಕಣದಲ್ಲಿದ್ದ 15 ಪಕ್ಷಗಳಲ್ಲಿ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಉಳಿದೆಲ್ಲರೂ ಠೇವಣಿ ಕಳೆದುಕೊಂಡಿದ್ದರು. ಹೆಚ್ಚಿನವರು ನೋಟಾಗಿಂತ ಕಡಿಮೆ ಮತ ಪಡೆದಿದ್ದರು.

ಈ ಬಾರಿ ಪಕ್ಷೇತರರು ಹೆಚ್ಚಾಗಿರುವುದರಿಂದ ಈ ಬಾರಿ ಕ್ಷೇತ್ರದಲ್ಲಿ ಎರಡು ವಿದ್ಯನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಬೇಕಿದೆ. ಪ್ರತಾಪಸಿಂಹ (ಬಿಜೆಪಿ), ಸಿ.ಎಚ್.ವಿಜಯಶಂಕರ್ (ಕಾಂಗ್ರೆಸ್), ಬಿ.ಚಂದ್ರ (ಬಿಎಸ್ಪಿ) ಅಬ್ಬರದ ನಡುವೆ ಪಕ್ಷೇತರರು ಎಷ್ಟು ಮತ ಪಡೆಯುತ್ತಾರೆ ಎಂಬುದು ಈಗಿನ ಲೆಕ್ಕಾಚಾರ.
ಸೋಲು-ಗೆಲುವಿಗಿಂತ ಹೆಚ್ಚಾಗಿ ಪಕ್ಷೇತರ ಅಭ್ಯರ್ಥಿಗಳ ಹಿನ್ನೆಲೆ, ಉದ್ಯೋಗ, ವಿದ್ಯಾಭ್ಯಾಸ ಹಾಗೂ ಅವರಿಗೆ ಲಭಿಸಿರುವ ಚಿಹ್ನೆಗಳು ಗಮನ ಸೆಳೆಯುತ್ತಿವೆ. ಸ್ವತಂತ್ರ ಅಭ್ಯರ್ಥಿಗಳಿಗೆ ಹೆಲಿಕಾಪ್ಟರ್, ಹಾಕಿ ಚೆಂಡು, ಕಂಪ್ಯೂಟರ್, ತೆಂಗಿನ ತೋಟ, ಸಿ.ಸಿ.ಟಿ.ವಿ ಕ್ಯಾಮೆರಾ, ಬಾವಿ, ಬಾಣಲೆ, ಟಿಲ್ಲರ್, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ಹವಾನಿಯಂತ್ರಕ, ಟ್ರಕ್, ವಜ್ರ, ಪ್ರೆಷರ್ ಕುಕ್ಕರ್ ಚಿಹ್ನೆಗಳು ಲಭಿಸಿವೆ.
ಒಂದಕ್ಕಿಂದ ಒಂದು ಚಿಹ್ನೆಗಳು ವಿಭಿನ್ನವಾಗಿವೆ. ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಾಮಪತ್ರದಲ್ಲಿ ಅಭ್ಯರ್ಥಿಗಳು ತಮಗೆ ಬೇಕಾದ ಕೆಲ ಚಿಹ್ನೆಗಳನ್ನು ಸೂಚಿಸಿದ್ದರು. ಅಂತಿಮವಾಗಿ ಆಯೋಗವು ಚಿಹ್ನೆಯನ್ನು ನಿಗದಿಪಡಿಸಿದೆ.

ಚುನಾವಣೆಯಲ್ಲಿ ಪೈಪೋಟಿ ಬಯಸಿ ವ್ಯಾಪಾರಿಗಳು, ಸರ್ಕಾರಿ ನಿವೃತ್ತ ನೌಕರರು, ಸಮಾಜ ಸೇವಕರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಕೃಷಿಕರು ಈ ಬಾರಿ ಕಣದಲ್ಲಿದ್ದಾರೆ.
ಮಂಡಿಮೊಹಲ್ಲಾದ ನಾಗೇಶ್ ಹೂವಿನ ವ್ಯಾಪಾರಿ. ತಿ.ನರಸೀಪುರದ ಲಿಂಗರಾಜು ಅವರು ಬಿ.ಇ ಓದಿದ್ದು ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಬಿಎಸ್ಸಿ ಓದಿರುವ ಎಂ.ಜೆ.ಸುರೇಶ್ಗೌಡ ಅವರು ಕೃಷಿಕರು. ನಿವೃತ್ತ ಪೊಲೀಸ್ ಪೊಲೀಸ್ ಅಧಿಕಾರಿ ಆಲ್ಲಿಷಾನ್ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಆದರೆ ಈ ಅಭ್ಯರ್ಥಿಗಳು ಇತರೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಹೋಲಿಸಿದರೆ ಅಬ್ಬರದ ಪ್ರಚಾರವನ್ನು ಅಷ್ಟಾಗಿ ನಡೆಸುತ್ತಿಲ್ಲವಾದರೂ, ಠೇವಣಿ ಪಡೆದುಕೊಳ್ಳುತ್ತಾರಾ ಎಂಬುದು ಮಾತ್ರ ಯಕ್ಷ ಪ್ರಶ್ನೆ.












Click it and Unblock the Notifications