ಧರಂ ಸಿಂಗ್ ನಿಧನಕ್ಕೆ ಮೈಸೂರಿನ ಹಲವೆಡೆ ಶ್ರದ್ಧಾಂಜಲಿ
ಮೈಸೂರು, ಜುಲೈ 27: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಾಮುಂಡಿಪುರಂ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಮಾಜಿ ನಗರಸಭೆ ಸದಸ್ಯರಾದ ಎಂ.ಕೆ.ಅಶೋಕ್ ಮಾತನಾಡಿ, "ಕಾಂಗ್ರೆಸ್ ನ ಹಿರಿಯ ನೇತಾರ ಧರಂಸಿಂಗ್ ಅವರು ನಮ್ಮನ್ನಗಲಿದ್ದು ಆಘಾತವನ್ನುಂಟು ಮಾಡಿದೆ. ಅವರ ಕುಟುಂಬದವರಿಗೆ ಈ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ," ಎಂದು ಹೇಳಿದರು.
"ಸಜ್ಜನಿಕೆಗೆ ಹೆಸರಾಗಿದ್ದ ಎನ್.ಧರಂಸಿಂಗ್ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದರು. ಸುಮಾರು ಐದು ದಶಕದ ರಾಜಕೀಯ ಜೀವನದಲ್ಲಿ ಅಜಾತ ಶತ್ರುವಾಗಿದ್ದರು. ರಾಜಕೀಯ ಜೀವನದುದ್ದಕ್ಕೂ ಧರಂಸಿಂಗ್ ಅವರು ಪ್ರತಿನಿಧಿಸಿದ ಮೌಲ್ಯಗಳು ಅನುಕರಣೀಯ. ಅಪ್ಪಟ ಜನಾನುರಾಗಿಯಾಗಿದ್ದ ಅವರಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗದವರೂ ಅಪ್ರತಿಮ ನಾಯಕನನ್ನು ಕಂಡಿದ್ದರು," ಎಂದು ಅಶೋಕ್ ಹೇಳಿದರು.
'ಅವರ ಅಗಲಿಕೆಯಿಂದ ನಾಡಿನ ಧೀಮಂತ ರಾಜಕಾರಣದ ಪರಂಪರೆ ಸೊರಗಿದೆ' ಎಂದರು. ಮೈಸೂರಿನ ಯಾವುದಾದರೂ ಪ್ರಮುಖ ವೃತ್ತಕ್ಕೆ ಧರಂಸಿಂಗ್ ರವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.