ನಂಜನಗೂಡು ಆಧ್ಯಾತ್ಮಿಕ, ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ: ಬೊಮ್ಮಾಯಿ
ನಂಜನಗೂಡು, ನವೆಂಬರ್ 29: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡನ್ನು ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಮತ್ತು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ನುಗು ಮತ್ತು ಹೆಡಿಯಾಲ ಏತ ನೀರಾವರಿ ಯೋಜನೆಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಕರ್ನಾಟಕ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.
ಮೈಸೂರು: 11 ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ 30 ಆಕಾಂಕ್ಷಿಗಳು, ನಂಜನಗೂಡಿಗೆ ಭಾರಿ ಪೈಪೋಟಿ
ಉದ್ಘಾಟನಾ ಭಾಷಣದ ವೇಳೆ ಸಿಎಂ ಬೊಮ್ಮಾಯಿ ಮಾತನಾಡಿ, ಅಧಿಕಾರದಲ್ಲಿರುವ ಸರ್ಕಾರ ಎಲ್ಲಾ ದೀನದಲಿತ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿದೆ ಎಂದರು. ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರ ಶ್ರಮವನ್ನು ಶ್ಲಾಘಿಸಿದ ಬೊಮ್ಮಾಯಿ, ಮಹರ್ಷಿ ವಾಲ್ಮೀಕಿ, ಡಾ ಬಿ ಆರ್ ಅಂಬೇಡ್ಕರ್ ಮತ್ತು ಡಿ ದೇವರಾಜ್ ಅರಸರು ಶ್ರೀಮಂತ ಪರಂಪರೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ ಎಂದರು.
ಉದ್ಘಾಟನೆಗೊಂಡ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುವಂತೆ ಕೋರಿದ ಅವರು, ನಂಜನಗೂಡು ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ ಅಭಿವೃದ್ಧಿ ಮಾಡಿದರೆ ರಾಜ್ಯದ ಅಭಿವೃದ್ಧಿ ಮಾಡಿದಂತೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಭಿವೃದ್ಧಿಪಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಅವರೊಬ್ಬ ನಾಯಕ ಎಂದರು.
ನುಗು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಈ ಹಿಂದೆ ಹದಗೆಟ್ಟಿದ್ದರೂ ಜಲಸಂಪನ್ಮೂಲ ಸಚಿವರು ದುರಸ್ತಿ ಮಾಡಿಸಿ ನೀರು ಬಿಟ್ಟಿದ್ದರು. ಹೆಡಿಯಾಲ ಏತ ನೀರಾವರಿ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಅದು ಪೂರ್ಣಗೊಂಡ ನಂತರ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವ ಗೋವಿಂದ್ ಕಾರಜೋಳ, ಶಾಸಕ ಹರ್ಷವರ್ಧನ್, ಸಂಸದ ಶ್ರೀನಿವಾಸಪ್ರಸಾದ್ ಮತ್ತು ಇತರ ಹಿರಿಯ ಸಚಿವರು ಉಪಸ್ಥಿತರಿದ್ದರು.